ಸುತ್ತೂರು ಮಠಕ್ಕೂ ಮೈಸೂರು ಅರಮನೆಗೂ ವಿಶೇಷ ಬಾಂಧವ್ಯವಿದೆ: ಯದುವೀರ್
ಮೈಸೂರು,ಜೂ.22: ಸುತ್ತೂರು ಮಠಕ್ಕೂ ಮೈಸೂರು ಅರಮನೆಗೂ ತಾತನ ಕಾಲದಿಂದಲೂ ವಿಶೇಷ ಬಾಂಧವ್ಯವಿದೆ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ನಗರದ ಜಗನ್ಮೋಹನ ಅರಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾಗಿದ್ದ ಶ್ರೀಜಯಚಾಮರಾಜೇಂದ್ರ ಒಡೆಯರ್ ಅವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸುತ್ತೂರು ಮಠಕ್ಕೂ ಮೈಸೂರು ಅರಮನೆಗೂ ಅವಿನಾಭಾವ ಸಂಬಂಧವಿದೆ. ಸುತ್ತೂರಿನ ಕಾರ್ಯವನ್ನು ನಮ್ಮ ತಾತ ಶ್ಲಾಘಿಸುತ್ತಿದ್ದರು. ಜಯಚಾಮರಾಜೇಂದ್ರ ಒಡೆಯರ್ ಮತ್ತು ಸುತ್ತೂರು ಮಠ ವಿದ್ಯೆಗೆ ಹೆಚ್ಚು ಒತ್ತನ್ನು ನೀಡಿದರು ಎಂದ ಹಳೆಯ ನಂಟನ್ನು ಬಿಡಿಸಿ ಹೇಳಿದರು.
ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ನಮ್ಮ ತಾತನ ಕಾಲದಿಂದಲೂ ಮೈಸೂರು ರಾಜಮನೆತನಕ್ಕೂ ಸುತ್ತೂರು ಮಠಕ್ಕೂ ಉತ್ತಮ ನಂಟಿದೆ. ಇಂದು ನಾನು ಸುತ್ತೂರು ಶ್ರೀಗಳೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರುವುದು ನಿಜಕ್ಕೂ ಸಂತಸ ಉಂಟು ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಮೇಯರ್ ಪುಷ್ಪಲತಾ ಜಗನ್ನಾಥ್, ಮೈಸೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕೆ.ಶಿವರಾಮು ಸೇರಿದಂತೆ ಹಲವರು ಉಪಸ್ಥಿತರಿದ್ದರು.