ಬಳ್ಳಾರಿಯವರನ್ನೇ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡಿ: ಬಿಜೆಪಿ ಶಾಸಕ ಬಿ.ಶ್ರೀರಾಮುಲು
ಬೆಂಗಳೂರು, ಜೂ. 23: ‘ಬಳ್ಳಾರಿಯ ಜನರ ಪ್ರೀತಿಯ ಬಗ್ಗೆ ಮಾತನಾಡುವ ನೀವು ಬಳ್ಳಾರಿಯ ಮಂತ್ರಿಗಳಲ್ಲಿ ಯಾರನ್ನಾದರೂ ಬಳ್ಳಾರಿಯ ಉಸ್ತುವಾರಿ ಸಚಿವರನ್ನಾಗಿ ಮಾಡಿ’ ಎಂದು ಶಾಸಕ ಬಿ.ಶ್ರೀರಾಮುಲು, ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಆಗ್ರಹಿಸಿದ್ದಾರೆ.
‘ರಾಜ್ಯ ಕಾಂಗ್ರೆಸ್ ಅನ್ನು ಕುಮಾರಸ್ವಾಮಿ ಮೇಲಿನ ನಿಮ್ಮ ಕುರುಡು ಪ್ರೇಮಕ್ಕಾಗಿ ಒಂದಂಕಿಗೆ ಇಳಿಸಿದ ಕೀರ್ತಿ ನಿಮಗೆ ಸಲ್ಲಬೇಕು. ಶಿವಕುಮಾರ್ ಅಣ್ಣನವರೇ, ನಾನು ಬಳ್ಳಾರಿಯ ಮಣ್ಣಿನ ಮಗ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ಹೋಗುವ ನಿಮ್ಮನ್ನು ಜನ ಶಿವಕುಮಾರ್ ಎಲ್ಲಿದ್ದೀಯಪ್ಪ ಎನ್ನುತ್ತಿದ್ದಾರೆ. ಬಳ್ಳಾರಿಯ ಜನ ವಲಸೆ ಬಂದವರಿಗೆ ತಮ್ಮ ಸ್ವಾಭಿಮಾನದಿಂದ ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಿಸಿದ್ದಾರೆ’ ಎಂದು ಶ್ರೀರಾಮುಲು ತಿರುಗೇಟು ನೀಡಿದ್ದಾರೆ
‘ಶುಭಮಹೂರ್ತ, ಶುಭ ಘಳಿಗೆಯಲ್ಲಾದರೂ ಇನ್ನು ಮುಂದೆ ಕೇವಲ ಚುನಾವಣಾ ಸಚಿವರಾಗದೆ ಬಳ್ಳಾರಿ ಅಭಿವೃದ್ಧಿಗೆ ಶ್ರಮಿಸಿ ಎಂದು ನಿಮ್ಮಲ್ಲಿ ಕಳಕಳಿಯ ಮನವಿಯನ್ನು ಮಾಡುತ್ತೇನೆ ಅಣ್ಣ’ ಎಂದು ಶ್ರೀರಾಮುಲು ಸರಣಿ ಟ್ವೀಟ್ ಮಾಡುವ ಮೂಲಕ ಡಿ.ಕೆ.ಶಿವಕುಮಾರ್ ಅವರ ಕಾಲೆಳೆದಿದ್ದಾರೆ.