ರೌಡಿ ಪಪ್ಪುಗೆ ಸಿಸಿಬಿ ಪೊಲೀಸರಿಂದ ಗುಂಡೇಟು
ಬೆಂಗಳೂರು, ಜೂ.23: ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಪಪ್ಪುಗೆ ಸಿಸಿಬಿ ಪೊಲೀಸರು ಕಾಲಿಗೆ ಪಿಸ್ತೂಲಿನಿಂದ ಗುಂಡು ಹೊಡೆದು ಬಂಧಿಸಿದ್ದಾರೆ.
ಶಿವಾಜಿನಗರ ನಿವಾಸಿಯಾಗಿರುವ ಅಮೀರ್ ಖಾನ್ ಯಾನೆ ಪಪ್ಪು(34) ಎಂಬಾತ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ರೌಡಿ ಎಂದು ತಿಳಿದುಬಂದಿದೆ.
ವಿವಿಧ ಪೊಲೀಸ್ ಠಾಣೆಗಳಲ್ಲಿ 2 ಕೊಲೆ, 22 ಗಂಭೀರ ಅಪರಾಧ ಪ್ರಕರಣಗಳು ರೌಡಿ ಪಪ್ಪು ಮೇಲೆ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ರವಿವಾರ ಮಧ್ಯಾಹ್ನ 2:30 ರ ಸುಮಾರಿಗೆ ಇಲ್ಲಿನ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಗುಬ್ಬಿ ಬಳಿ ಪಪ್ಪು ಇದ್ದ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸಿದ ತನಿಖಾ ತಂಡ ಅಲ್ಲಿಗೆ ತೆರಳಿ ಬಂಧಿಸಲು ಮುಂದಾಗಿದ್ದಾರೆ.
ಈ ವೇಳೆ ಸಿಸಿಬಿ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ್, ಮುಖ್ಯಪೇದೆ ಉಮೇಶ್ ಅವರ ಮೇಲೆ ಆರೋಪಿ ಪಪ್ಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಯತ್ನಿಸಿದಾಗ, ಎಚ್ಚೆತ್ತ ಪೊಲೀಸರು, ಆತನ ಕಾಲಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.