ರುಂಡ-ಮುಂಡ ಬೇರ್ಪಟ್ಟ ಮೃತದೇಹ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆ
ಹನೂರು, ಜೂ.24: ವ್ಯಕ್ತಿಯೋರ್ವರ ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿ ನಂತರ ಪೆಟ್ರೋಲ್ ಹಾಕಿ ಸುಟ್ಟಿರುವ ಘಟನೆ ಹನೂರು ಪೊಲೀಸ್ ಠಾಣೆ ವ್ಯಾಪ್ತಿಯ ಚಿಂಚಹಳ್ಳಿಯ ಕಾಡಂಚಿನ ಭಾಗದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹನೂರು ತಾಲೂಕು ಕೇಂದ್ರದಿಂದ 6 ಕಿ.ಮೀ ದೂರವಿರುವ ಚಿಂಚಹಳ್ಳಿ ಹಾಗೂ ಮಣಗಳ್ಳಿ ಗ್ರಾಮದ ಹೊರವಲಯದ ವೆಂಕಟಯ್ಯನ ಕೆರೆ ಸಮೀಪ ದುಷ್ಕರ್ಮಿಗಳು ವ್ಯಕ್ತಿಯೊರ್ವರ ರುಂಡ-ಮುಂಡ ಬೇರ್ಪಡಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಘಟನೆ ನಡೆದು ಹಲವು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಕೊಲೆಯಾಗಿರುವ ವ್ಯಕ್ತಿಯ ಸಂಪೂರ್ಣ ದೇಹ ಸುಟ್ಟು ಕರಕಲಾಗಿರುವುದರಿಂದ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಕಾಡಂಚಿನ ಭಾಗದಲ್ಲಿ ಮೇಕೆ ಮೇಯಿಸಲು ಹೋದಾಗ ಘಟನೆ ಬಗ್ಗೆ ತಿಳಿದಿದ್ದು, ತಕ್ಷಣ ಹನೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕೊಲೆಯಾದದ್ದು ಯಾರು?: ಕಳೆದ ವಾರ ಮಣಗಳ್ಳಿ ಗ್ರಾಮದ ವೆಂಕಟಯ್ಯ(60) ಎಂಬುವರು ಕಾಣೆಯಾಗಿದ್ದರು. ಈ ಬಗ್ಗೆ ದೂರು ಸಹ ದಾಖಲಾಗಿತ್ತು. ಈ ಈ ವ್ಯಕ್ತಿಯೇ ಕೊಲೆಯಾಗಿರಬಹುದು ಎಂಬ ಚರ್ಚೆಯು. ಗ್ರಾಮಸ್ಥರಲ್ಲಿ ನಡೆಯುತ್ತಿದೆ.
ಕೊಲೆಯಾಗಿರುವ ವ್ಯಕ್ತಿಯ ದೇಹ ಸಂಪೂರ್ಣ ಸುಟ್ಟಿರುವುದರಿಂದ ಗುರುತಿಸಲಾಗದ ಪರಿಸ್ಥಿತಿ ಇದ್ದು, ಪೊಲೀಸರ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ.