ನಾಡಗೀತೆ ಅವಧಿ ಇಳಿಸಲು ರಾಜ್ಯ ಸರಕಾರ ಒಪ್ಪಿಗೆ ?
ಬೆಂಗಳೂರು, ಜೂ.26: ರಾಜ್ಯದ ನಾಡಗೀತೆಯನ್ನು 2.30 ನಿಮಿಷಕ್ಕೆ ಇಳಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರಕಾರ ಬಹುತೇಕ ಒಪ್ಪಿಗೆ ಸೂಚಿಸಿದ್ದು, ಅಧಿಕೃತ ಅಧಿಸೂಚನೆಯಷ್ಟೇ ಬಾಕಿ ಉಳಿದಿದೆ.
ನಾಡಗೀತೆಯಾದ ಜಯ ಭಾರತ ಜನನೀಯ ತನುಜಾತೆಯ ಸಮಯ ಕಡಿಮೆ ಮಾಡುವ ಉದ್ದೇಶದಿಂದ ಕಸಾಪ ಹಾಗೂ ಸಾಹಿತಿಗಳು, ಲೇಖಕರು, ಬರಹಗಾರರು ಸಭೆ ಸೇರಿ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಇನ್ನೂ ಅಧಿಕೃತವಾಗಿ ಆದೇಶವಾಗಿಲ್ಲ.
ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆಯ ಯಾವುದೇ ಸಾಲುಗಳಿಗೆ ಕತ್ತರಿಯಾಕದಂತೆ ಹಿನ್ನೆಲೆ ಸಂಗೀತ, ಧ್ವನಿ ಕಡಿಮೆ ಮಾಡುವ ಮೂಲಕ ಅವಧಿ ಕಡಿಮೆ ಮಾಡಬೇಕು ಎಂದು ಕಸಾಪ ಅಧ್ಯಕ್ಷರ ನೇತೃತ್ವದ ವರದಿ ಪ್ರಸ್ತಾವನೆ ಸಲ್ಲಿಸಿ, ಮನವಿ ಮಾಡಲಾಗಿತ್ತು. 2014 ರಲ್ಲಿಯೂ ನಾಡಗೀತೆ ಅವಧಿಯನ್ನು 1.50 ನಿಮಿಷಕ್ಕೆ ಇಳಿಸುವಂತೆ ಸಾಹಿತಿ ಚನ್ನವೀರ ಕಣವಿ ನೇತೃತ್ವದ ಸಮಿತಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.