ಪೊಲೀಸರಿಂದ ರಾತ್ರೋರಾತ್ರಿ ಗುಡಿಸಲು ತೆರವು: ಹಕ್ಕಿ-ಪಿಕ್ಕಿ ಜನಾಂಗದಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ
ಹಾಸನ, ಜೂ.26: ಬೇಲೂರು ತಾಲೂಕಿನ ಮಾದಿಹಳ್ಳಿ ಹೋಬಳಿಯ ತಟ್ಟೆಹಳ್ಳಿಯಲ್ಲಿ ವಾಸವಾಗಿದ್ದ ಬುಡಕಟ್ಟು ಜನಾಂಗದ ಹಕ್ಕಿ-ಪಿಕ್ಕಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಲ್ಲದೆ, ಯಾವುದೇ ನೋಟಿಸ್ ನೀಡದೆ ಗುಡಿಸಲುಗಳನ್ನು ತೆರವುಗೊಳಿಸಿದ್ದಾರೆಎಂದು ಆರೋಪಿಸಿ ಹಕ್ಕಿ-ಪಿಕ್ಕಿ ಜನಾಂಗದ ಸಂತ್ರಸ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ನ್ಯಾಯದೊರಕಿಸಿ ಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ನಾವು ಬುಡಕಟ್ಟು ಜನಾಂಗದ ಹಕ್ಕಿ-ಪಿಕ್ಕಿ ಜಾತಿಗೆ ಸೇರಿದ್ದು, ಬೇಲೂರು ತಾಲೂಕು ಮಾದಿಹಳ್ಳಿ ಹೋಬಳಿಯ ಅಂಗಡಿಹಳ್ಳಿಯಲ್ಲಿ ಎರಡು ತಲೆಮಾರುಗಳಿಂದ ವಾಸವಾಗಿದ್ದೇವೆ. ಮೂಲತಃ ಅಲೆಮಾರಿಗಳಾಗಿದ್ದು, ಈಗ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸಬೇಕಾದ ಪರಿಸ್ಥಿತಿಯಲ್ಲಿ ಬದುಕು ದೂಡುತ್ತಿದ್ದೇವೆ. ಹೀಗಿರುವಾಗ ತಟ್ಟೆಹಳ್ಳಿ ಜಾಗದಲ್ಲಿರುವ ಗುಡಿಸಲುಗಳನ್ನು ತೆರವು ಮಾಡುವಂತೆ ಯಾವ ಆದೇಶ ಇಲ್ಲದಿದ್ದರೂ ಮಂಗಳವಾರ ರಾತ್ರಿ ಹಳೆಬೀಡು ವ್ಯಾಪ್ತಿಯ ಎಸ್ಸೈ ಭರತ್ಗೌಡ ಮತ್ತು ಸಿಬ್ಬಂದಿ ಏಕಾಏಕಿ ಗ್ರಾಮಕ್ಕೆ ಆಗಮಿಸಿ ಹಲ್ಲೆ ಮಾಡಿದ್ದಲ್ಲದೆ, ವಾಸವಿದ್ದ ಗುಡಿಸಲುಗಳನ್ನು ಧ್ವಂಸ ಮಾಡಿರುವುದಾಗಿ ಆರೋಪಿಸಿದರು.
ಈ ಸಂದಭರ್ದಲ್ಲಿ ಸಮತ ಸೈನಿಕ ದಳದ ಜಿಲ್ಲಾಧ್ಯಕ್ಷ ಆರ್ಪಿಐ ಸತೀಶ್, ಯುವ ಘಟಕದ ಜಿಲ್ಲಾಧ್ಯಕ್ಷ ಆರ್ಪಿಐ ಮಧು ನಿಟ್ಟೂರು, ಮಾನವ ಹಕ್ಕುಗಳ ವೇದಿಕೆಯ ಮರೀಜೋಸೆಪ್, ತಾಲೂಕು ಅಧ್ಯಕ್ಷ ರಂಜಿತ್ ಕುಮಾರ್, ಬುಡಕಟ್ಟು ಹಕ್ಕಿ-ಪಿಕ್ಕಿ ಜನಾಂಗದ ಕುನಿಷಾ, ಉದಯಕುಮಾರ್, ಪರಿಮಳಾ, ಲಾಲೇಶ್ ಮತ್ತಿತರರು ಉಪಸ್ಥಿತರಿದ್ದರು.