ಶೂಟೌಟ್ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಇನ್ಸ್ ಪೆಕ್ಟರ್ ಕುಮಾರ್ ಮೇಲೆ ಸಿಐಡಿ ಪೊಲೀಸರ ಅನುಮಾನ
ಮೈಸೂರು,ಜೂ.27: ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಇನ್ಸ್ಪೆಕ್ಟರ್ ಕುಮಾರ್ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಮಾಹಿತಿಯನ್ನು ಸಿಐಡಿ ಪೊಲೀಸರು ಹೊರಹಾಕಿದ್ದಾರೆ.
ತನಿಖೆಯ ವಿಚಾರಣೆ ನಡೆಸಿ ಸಿಐಡಿ ಪೊಲೀಸರು ಇನ್ಸ್ ಪೆಕ್ಟರ್ ಕುಮಾರ್ ಶೂಟೌಟ್ ಮಾಡುವ ವೇಳೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ, ಮತ್ತು ಪ್ರಕರಣದ ಪ್ರಮುಖ ರೂವಾರಿ ಉದ್ಯಮಿಯೊಬ್ಬರ ನಿರಂತರ ಸಂಪರ್ಕವನ್ನು ಹೊಂದಿದ್ದು, ಆತನಿಂದ ಬಾರಿ ಮೊತ್ತದ ಹಣ ಪಡೆದು ಉದ್ದೇಶಪೂರ್ವಕವಾಗಿ ಶೂಟೌಟ್ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ ಎಂಬ ವರದಿಯನ್ನು ಸರ್ಕಾರಕ್ಕೆ ನೀಡಿದ್ದಾರೆ.
ನಗರದ ವಿಜಯನಗರದ ಮನೆಯೊಂದರಲ್ಲಿ ಹಣವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ವಿಜಯನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಕುಮಾರ್ ಮತ್ತು ತಂಡ ದಾಳಿ ನಡೆಸಿ ಪಂಜಾಬ್ ಮೂಲದ ವ್ಯಕ್ತಿಯೊಬ್ಬರನ್ನು ಶೂಟೌಟ್ ಮಾಡಿ ಕೊಲ್ಲಲಾಗಿತ್ತು. ಪ್ರಕರಣದ ಬಗ್ಗೆ ಹಣ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬ ಇದೊಂದು ಪೂರ್ವನಿಯೋಜಿತ ಕೃತ್ಯ ಇದರ ಹಿಂದೆ ಪೊಲೀಸರು ಸೇರಿದಂತೆ ಹಲವರ ಕೈವಾಡವಿದೆ ಎಂಬ ಮಾಹಿತಿಯನ್ನು ನೀಡಿ ದೂರು ನೀಡಿದ್ದರು.
ಪ್ರಕರಣದ ವಿಚಾರಣೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ತನಿಖೆಯನ್ನು ಸಿಐಡಿ ಪೊಲೀಸರಿಗೆ ವಹಿಸಿತ್ತು. ಪೊಲೀಸ್ ಇನ್ಸ್ ಪೆಕ್ಟರ್ ಸೇರಿದಂತೆ ಹಲವರನ್ನು ವಿಚಾರಣೆ ನಡೆಸಿದ ಸಿಐಡಿ ಪೊಲೀಸರು ಇನ್ಸ್ ಪೆಕ್ಟರ್ ಕುಮಾರ್ ಕರ್ತವ್ಯ ಲೋಪವೆಸಗಿದ್ದಾರೆ ಎಂದು ವರದಿ ನೀಡಿದ್ದಾರೆ.