ಕೆಂಪೇಗೌಡರ ಕುರಿತು ಇನ್ನಷ್ಟು ಸಂಶೋಧನೆಗಳು ಆಗಬೇಕು: ಸಚಿವ ಜಿ.ಟಿ.ದೇವೇಗೌಡ
ಮೈಸೂರು,ಜೂ.27: ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ ಇರುವ ಹಿನ್ನಲೆಯಲ್ಲಿ ಕೆಂಪೇಗೌಡರ ಕುರಿತು ಇನ್ನಷ್ಟು ಸಂಶೋಧನೆಗಳು ಆಗಬೇಕು ಎಂದು ಸಚಿವ ಜಿ.ಟಿ.ದೇವೇಗೌಡ ಅಭಿಪ್ರಾಯಿಸಿದರು.
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 509ನೇ ಜಯಂತಿ ಹಿನ್ನಲೆಯಲ್ಲಿ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಗುರುವಾರ ಮೆರವಣಿಗೆಗೆ ಚಾಲೆನ ನೀಡಿದರು. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಕಲಾಮಂದಿರದವರೆಗೂ ಸಾಗಿತು.
ನಂತರ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡ, ಬೆಂಗಳೂರು ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ ಅಂದರೆ ಅದು ಕೆಂಪೇಗೌಡರ ಕೊಡುಗೆ. ಕೆಂಪೇಗೌಡ ಜಯಂತಿಗೆ ರಜಾ ಬೇಡ ಎಂದು ಆವತ್ತು ಹೇಳಿದ್ದೆವು. ಎಲ್ಲರಿಗೂ ರಜೆ ನೀಡಿದರೆ, ನಮಗೂ ನೀಡಿ ಇಲ್ಲ ಅಂದರೆ ರದ್ದು ಮಾಡಿ ಅಂತ ಹೇಳಿದ್ದೆವು. ಅದೇ ರೀತಿ ಯಾರೂ ಕೂಡ ರಜೆ ಘೋಷಣೆ ಮಾಡಿ ಅಂತ ನಾವು ಹೇಳುತ್ತಿಲ್ಲ. ಕೆಂಪೇಗೌಡರ ಕೊಡುಗೆ ಅಪಾರ ಇರುವ ಹಿನ್ನೆಲೆಯಲ್ಲಿ ಕೆಂಪೇಗೌಡರ ಕುರಿತು ಇನ್ನಷ್ಟು ಸಂಶೋಧನೆಗಳು ಆಗಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲದಲ್ಲಿ ಕೆಂಪೇಗೌಡರ ಪ್ರಾಧಿಕಾರ ರಚಿಸುವ ಬಗ್ಗೆ ಬೇಡಿಕೆಯನ್ನು ಇಟ್ಟಿದ್ದೇವೆ ಅದನ್ನು ಮನ್ನಿಸಿ ಪ್ರಾಧಿಕಾರ ಮಾಡಿದ್ದಾರೆ. ಪ್ರಾಧಿಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಸಿಎಂ ಕೂಡ ಹೆಚ್ಚಿನ ಅಭಿವೃದ್ಧಿ ಮಾಡುವ ಸಲುವಾಗಿ ಕಾರ್ಯಕ್ರಮ ರೂಪಿಸುತ್ತಿದ್ದಾರೆ ಎಂದರು.
ಈ ಸಂದರ್ಭ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥಾನಂದ ಸ್ವಾಮೀಜಿ, ಶಾಸಕ ಎಲ್.ನಾಗೇಂದ್ರ , ಜಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮೇಯರ್ ಪುಷ್ಪಲತಾ ಜಗನ್ನಾಥ್ , ಉಪಮೇಯರ್ ಶಫಿ ಅಹಮದ್, ಜಿ.ಪಂ.ಅಧ್ಯಕ್ಷೆ ಪರಿಮಳಾ ಶ್ಯಾಮ್, ಜಿ.ಪಂ.ಸದಸ್ಯೆ ಮಂಗಳ ಸೋಮಶೇಖರ್, ಮಾಜಿ ಶಾಸಕ ವಾಸು, ಮನಪಾ ಆಯುಕ್ತೆ ಶಿಲ್ಪಾನಾಗ್ ಮತ್ತಿತರರು ಉಪಸ್ಥಿತರಿದ್ದರು.
ಇದೆ ವೇಳೆ ಡಮರುಗ ಹಿಡಿದು ಸಚಿವ ಜಿ.ಟಿ ದೇವೇಗೌಡ ಹೆಜ್ಜೆ ಹಾಕಿದರಲ್ಲದೇ, ವಾದ್ಯಕ್ಕೆ ತಕ್ಕಂತೆ ಕುಣಿದರು. ಹುಲಿವೇಷ ಸೇರಿದಂತೆ ಜಾನಪದ ಕಲಾತಂಡಗಳು ಮೆರವಣಿಗೆಯದ್ದಕ್ಕೂ ಸಾಗಿ ಬಂತು.