ಕಾಲಭೈರವೇಶ್ವರ ಪವಾಡದಿಂದ ಮುಖ್ಯಮಂತ್ರಿಯಾದೆ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಜು.1: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಫಲಿತಾಂಶವನ್ನು ನೋಡಿ ರಾಜಕೀಯ ನಿವೃತ್ತಿಗೆ ಚಿಂತಿಸಿದ್ದೆ. ಆದರೆ, ಕಾಲಭೈರವೇಶ್ವರನ ಪವಾಡದಿಂದ ಮುಖ್ಯಮಂತ್ರಿಯಾದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಿಸಿದ್ದಾರೆ.
ಅಮೆರಿಕಾದ ನ್ಯೂಜೆರ್ಸಿಯಲ್ಲಿ ಆದಿಚುಂಚನಗಿರಿ ಮಠದ ವತಿಯಿಂದ ನಿರ್ಮಾಣವಾಗುತ್ತಿರುವ ಕಾಲಭೈರವೇಶ್ವರ ದೇಗುಲದ ಅಡಿಗಲ್ಲು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.
ವಿಧಾನಸಭಾ ಫಲಿತಾಂಶದ ದಿನ ಕಾಲಭೈರವೇಶ್ವರನ ದರ್ಶನ ಪಡೆಯಬೇಕೆಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದರು. ಅವರ ಮಾತಿನಂತೆ ದರ್ಶನ ಪಡೆದೆ. ಆದರೂ, ಚುನಾವಣೆಯ ಫಲಿತಾಂಶದಿಂದ ಬೇಸರವಾಗಿ ರಾಜಕೀಯ ನಿವೃತ್ತಿಗೆ ಚಿಂತಿಸುತ್ತಿದ್ದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವರಿಷ್ಠರಿಂದ ಮುಖ್ಯಮಂತ್ರಿ ಆಗುವಂತೆ ಕರೆ ಬಂತು ಎಂದು ಅವರು ಹೇಳಿದರು.
ಆದಿಚುಂಚನಗಿರಿಯಲ್ಲಿರುವ ಕಾಲಭೈರವೇಶ್ವರನ ದೇವಾಲಯ ನಿರ್ಮಾಣಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ನನ್ನಿಂದಲೆ ಅಡಿಗಲ್ಲು ಹಾಕಿಸಿದ್ದರು. ಈಗ ನ್ಯೂಜಿರ್ಸಿಯಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯಕ್ಕೂ ನಾನೇ ಅಡಿಗಲ್ಲು ಹಾಕುತ್ತಿದ್ದೇನೆ. ಇದು ನನ್ನ ಪುಣ್ಯವೆಂದು ಅವರು ಹೇಳಿದರು.