ನಮ್ಮ ಸಂಪರ್ಕದಲ್ಲಿಯೂ ಬಿಜೆಪಿ ಶಾಸಕರಿದ್ದಾರೆ: ಸಚಿವ ಯು.ಟಿ.ಖಾದರ್
"ರಾಜೀನಾಮೆಯಿಂದ ಸರಕಾರದ ಮೇಲೆ ಯಾವುದೇ ಪರಿಣಾಮವಿಲ್ಲ"
ಕಲಬುರಗಿ, ಜು.2: ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಮುಂದಾಗಿದ್ದಾರೆ. ಆದರೆ, ನಮ್ಮ ಸಂಪರ್ಕದಲ್ಲಿಯೂ ಬಿಜೆಪಿಯ ಅನೇಕ ಶಾಸಕರಿದ್ದಾರೆ. ಆದರೆ, ನಾವಾಗಿಯೆ ಆಪರೇಷನ್ ಮಾಡಲು ಹೋಗಿಲ್ಲ. ಇದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕೆಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳಿಗೂ ಸರಕಾರಕ್ಕೂ ಯಾವುದೆ ಸಂಬಂಧವಿಲ್ಲ. ಕೆಲ ಶಾಸಕರ ರಾಜೀನಾಮೆಯಿಂದ ಸರಕಾರದ ಮೇಲೆ ಯಾವುದೆ ಪರಿಣಾಮವಿಲ್ಲವೆಂದು ತಿಳಿಸಿದರು.
ಐದು ವರ್ಷ ಸಮ್ಮಿಶ್ರ ಸರಕಾರ ಸುಭದ್ರವಾಗಿರುತ್ತದೆ. ಮೈತ್ರಿ ಸರಕಾರದ ಎಲ್ಲ ಸಚಿವ ಹಾಗೂ ಶಾಸಕರನ್ನು ಸಿಎಲ್ಪಿ ನಾಯಕ ಸಿದ್ದರಾಮಯ್ಯ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸರಕಾರ ಯಾವುದೆ ಕಾರಣಕ್ಕೂ ಪತನವಾಗುವ ಮಾತೇ ಇಲ್ಲವೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
Next Story