ಪ್ರತ್ಯೇಕ ರಸ್ತೆ ಅಪಘಾತ: ಮೂವರು ಮೃತ್ಯು
ತುಮಕೂರು, ಜು.2: ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾ ತಾಲೂಕು ಕಳ್ಳಂಬೆಳ್ಳಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಂದು ಮುಂಜಾನೆ ನಡೆದಿದೆ.
ಮುಂದೆ ಚಲಿಸುತ್ತಿದ್ದ ವಿಆರ್ಎಲ್ ಲಾರಿಗೆ ಹಿಂದಿನಿಂದ ಅತಿ ವೇಗವಾಗಿ ಬಂದ ಟಾಟಾಏಸ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಸೇರಿದಂತೆ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಶಿರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಬಳ್ಳಾರಿ ಮೂಲದವರು ಎಂದು ಗುರುತಿಸಲಾಗಿದೆ. ಹೆಸರು, ವಿಳಾಸ ತಿಳಿದು ಬಂದಿಲ್ಲ.
ಟಾಟಾ ಏಸ್ ವಾಹನ ಬಳ್ಳಾರಿಯಿಂದ ಮನೆಯ ಸಾಮಗ್ರಿಗಳನ್ನು ತುಂಬಿಕೊಂಡು ಬೆಂಗಳೂರಿನತ್ತ ತೆರಳುತ್ತಿತ್ತು ಎನ್ನಲಾಗಿದ್ದು, ಮನೆ ಖಾಲಿ ಮಾಡಿಕೊಂಡು ಹೋಗುತ್ತಿದ್ದರೆಂದು ಶಂಕಿಸಲಾಗಿದೆ.
ಮತ್ತೊಂದು ಅಪಘಾತ ರಾಷ್ಟ್ರೀಯ ಹೆದ್ದಾರಿ-48ರ ತರೂರು ಗೇಟ್ ಬಳಿ ಸಂಭವಿಸಿದ್ದು, ಹೊಲ ಉಳುಮೆ ಮಾಡಿಕೊಂಡು ಊರಿನತ್ತ ತೆರಳುತ್ತಿದ್ದ ಟ್ರ್ಯಾಕ್ಟರ್ ಗೆ ಲಾರಿ ಅಪ್ಪಳಿಸಿದ್ದರಿಂದ ಟ್ರ್ಯಾಕ್ಟರ್ ಚಾಲಕ ವೆಂಕಟೇಶ್ (45) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಕಳ್ಳಂಬೆಳ್ಳ ಪೊಲೀಸರು ಈ ಎರಡು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.