ಖ್ಯಾತ ಪರಿಸರವಾದಿ ನಂಬಿಯಾರ್ ನಿಧನ
ಚಿಕ್ಕಮಗಳೂರು, ಜು.4: ಖ್ಯಾತ ಪರಿಸರವಾದಿ, ಭದ್ರ ಅಭಯಾರಣ್ಯದ ಮಾಜಿ ವನ್ಯ ಜೀವಿ ಪರಿಪಾಲಕ ಹಾಗೂ ವನ್ಯ ಜೀವಿ ಛಾಯಾಗ್ರಾಹಕ ರಾಜನ್ ನಂಬಿಯಾರ್(84)ಅವರು ಬುಧವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಪರಿಸರ ಪ್ರೇಮಿಯಾಗಿದ್ದ ರಾಜನ್ ನಂಬಿಯಾರ್ ರವರು ಪತ್ನಿ ಲೀಲಾ, ಮಗ ಪ್ರಸನ್ನ ರಾಜ್ ಹಾಗೂ ಮಗಳು ಸೋನಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಕಾಡು ಮತ್ತು ಪರಿಸರದೊಂದಿಗೆ ಅಪಾರ ನಂಟು ಹೊಂದಿದ್ದ ರಾಜನ್ ನಂಬಿಯಾರ್ ಸೆರೆ ಹಿಡಿದ ವನ್ಯ ಜೀವಿಗಳ ಅನೇಕ ಛಾಯಾ ಚಿತ್ರಗಳು ಅರಣ್ಯ ಹಾಗೂ ವನ್ಯ ಜೀವಿಗಳ ಬಗ್ಗೆ ಅವರು ಹೊಂದಿದ್ದ ಅಪಾರ ಪ್ರಿತಿ ಹಾಗೂ ಆಸಕ್ತಿಯನ್ನು ತೋರಿಸುತ್ತದೆ. ನಂಬಿಯಾರ್ ರವರ ಪರಿಸರಾಸಕ್ತಿ ಹಾಗೂ ಕಾಡು ಮತ್ತು ವನ್ಯ ಜೀವಿಗಳ ಬಗ್ಗೆ ಅವರಿಗಿದ್ದ ತಿಳುವಳಿಕೆ ಅಪಾರವಾಗಿತ್ತು. ಇದನ್ನು ಗುರುತಿಸಿ ಸರಕಾರ ಅವರನ್ನು ಈ ಹಿಂದೆ ಭದ್ರಾ ಅಭಯಾರಣ್ಯದ ಗೌರವ ವಾರ್ಡನ್ ಆಗಿ ನೇಮಿಸಿತ್ತು. ನಂಬಿಯಾರ್ ರವರು ಹಲವು ಅರಣ್ಯ ಇಲಾಖಾಧಿಕಾರಿಗಳಿಗೆ ಮಾರ್ಗದರ್ಶನವೂ ನೀಡಿದ್ದಾರೆ.
ನಗರದ ರತ್ನಗಿರಿ ಬೋರೆ ಬಳಿಯಲ್ಲಿರುವ ದಿವಂಗತರ ಮನೆಯಲ್ಲಿ ಇಂದು ಬೆಳಗ್ಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಧ್ಯಾಹ್ನ ಉಪ್ಪಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು.