ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣ: ದ.ಕ ಜಿಲ್ಲಾ ಕ್ಯಾಂಪಸ್ ಎಸ್ಸೆಸ್ಸೆಫ್ ಖಂಡನೆ
ಪುತ್ತೂರು, ಜು.4: ಪುತ್ತೂರು ಕಾಲೇಜ್ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ಹಾಗೂ ಅತ್ಯಾಚಾರದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಘಟನೆಯನ್ನು ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕ್ಯಾಂಪಸ್ ತೀವ್ರವಾಗಿ ಖಂಡಿಸಿದೆ ಹಾಗೂ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ, ಆರೋಪಿಗಳಿಗೆ ಕಾನೂನಿನಡಿ ತಕ್ಕ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದೆ.
ಇದು ಸಾಮೂಹಿಕ ಅತ್ಯಾಚಾರ ಪ್ರಕರಣವಾಗಿದ್ದು, ವಿದ್ಯಾರ್ಥಿನಿಗೆ ಮಾದಕ ವಸ್ತು ನೀಡಿ ಅತ್ಯಾಚಾರ ಎಸಗಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆಯ ಅಗತ್ಯವಿದ್ದು, ಆರೋಪಿಗಳಿಗೆ ಶೀಘ್ರ ಶಿಕ್ಷೆ ಜಾರಿಯಾಗಬೇಕಿದೆ. ಎಸ್ಸೆಸ್ಸೆಫ್ ಈ ಹಿಂದೆ ರಾಜ್ಯಾದ್ಯಂತ ಮಾದಕ ದ್ರವ್ಯ ಜಾಗೃತಾ ಅಭಿಯಾನ ಹಾಗೂ ಸಮಾವೇಶ ನಡೆಸಿದ್ದು, ಮಾದಕ ದ್ರವ್ಯದ ಪರಿಣಾಮಗಳ ಬಗ್ಗೆ ಸಂಘ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ವಿಶೇಷ ಅಭಿಯಾನ ನಡೆಸಬೇಕಿದೆ. ಇಂತಹ ಪ್ರಕರಣಗಳ ಬಗ್ಗೆ ಮಾದ್ಯಮಗಳು ಧರ್ಮ, ಜಾತಿ, ಸಂಘಟನೆ ರಾಜಕೀಯ ನೋಡದೆ ನಿಜಸ್ಥಿತಿಯನ್ನು ಬಿತ್ತರಿಸಬೇಕು ಎಂದು ಎಸ್ಸೆಸ್ಸೆಫ್ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಅಲೀ ತುರ್ಕಳಿಕ್ಕೆ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.