ಜೆಡಿಎಸ್ ಶಾಸಕರು ರೆಸಾರ್ಟ್ಗೆ ಶಿಫ್ಟ್
ಬೆಂಗಳೂರು, ಜು.8: ಖಾಸಗಿ ಹೊಟೇಲ್ನಲ್ಲಿ ನಡೆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆಗಿನ ಶಾಸಕಾಂಗ ಸಭೆಯ ಬಳಿಕ ಜೆಡಿಎಸ್ನ ಶಾಸಕರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೊಡಗುರ್ಕಿ ಗ್ರಾಮದ ಬಳಿ ಇರುವ ಪ್ರಸಿದ್ಧ ರೆಸಾರ್ಟ್ಗೆ ತೆರಳಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ರಾಜೀನಾಮೆಗಳ ಪರ್ವ ಮುಂದುವರಿದಿದ್ದು, ಮತ್ತಷ್ಟು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಸಂಶಯದ ಮೇಲೆ ಮುಂದಾಲೋಚನಾ ಕ್ರಮವಾಗಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಗರದಲ್ಲಿಂದು ಖಾಸಗಿ ಹೊಟೇಲ್ನಲ್ಲಿ ಶಾಸಕಾಂಗ ಸಭೆ ನಡೆಸಿದ ಬಳಿಕ 45 ಆಸನವಿರುವ ಬಸ್ ಮೂಲಕ ನೇರವಾಗಿ ರೆಸಾರ್ಟ್ಗೆ ತೆರಳಿದರು.
ಜೆಡಿಎಸ್ ಪಕ್ಷದ ಎಲ್ಲ ಶಾಸಕರು ರೆಸಾರ್ಟ್ಗೆ ತೆರಳಿದ್ದು, ಇಲ್ಲಿಂದಲೇ ಸಿಎಂ ರಣತಂತ್ರ ರೂಪಿಸಲಿದ್ದಾರೆ. ಇನ್ನೆರಡು ದಿನಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡಲಿದ್ದು, ಅನಂತರ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿ ಮರಳಲಿದ್ದಾರೆಂದು ಮೂಲಗಳು ತಿಳಿಸಿವೆ.
Next Story