ಪಕ್ಷೇತರರನ್ನು ನಂಬಬೇಡಿ ಎಂದು ಮೊದಲೇ ಹೇಳಿದ್ದೆ: ಕೆ.ಎಚ್.ಮುನಿಯಪ್ಪ ವಾಗ್ದಾಳಿ
ಬೆಂಗಳೂರು, ಜು.8: ಪಕ್ಷೇತರರನ್ನು ನಂಬಬೇಡಿ ಎಂದು ನಾನು ಮೊದಲೇ ಹೇಳಿದ್ದೆ. ಪಕ್ಷೇತರರನ್ನು ಮಂತ್ರಿಯನ್ನಾಗಿ ಮಾಡಬಾರದಿತ್ತು. ಪಕ್ಷೇತರರು ಕಡೆಗಳಿಗೆಯಲ್ಲಿ ಕೈ ಕೊಡ್ತಾರೆ ಎಂದಿದ್ದೆ. ಅದೇ ಆಗಿದೆ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಪಕ್ಷೇತರ ಸದಸ್ಯ ನಾಗೇಶ್ ವಿರುದ್ಧ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿಗಳೆಲ್ಲ ರಾಜೀನಾಮೆ ನೀಡಿ ಅತೃಪ್ತ ಶಾಸಕರಿಗೆ ಅವಕಾಶ ನೀಡಬೇಕಿದೆ. ಹಿಂದೆ ನಾನು ಈ ಮಾತು ಹೇಳಿದ್ದೆ. ಇದೀಗ ಮಂತ್ರಿಗಳು ರಾಜೀನಾಮೆ ನೀಡಿದ್ದಾರೆ. ಸಮ್ಮಿಶ್ರ ಸರಕಾರ ನಡೆಸಬೇಕಾದರೆ ಸೆಕೆಂಡ್ ಲೈನ್ ಲೀಡರ್ಸ್ಗೆ ಅವಕಾಶ ಮಾಡಿ ಕೊಡಬೇಕು ಎಂದು ತಿಳಿಸಿದರು.
ಎರಡು ಪಕ್ಷಗಳ ಹಿರಿಯರು ಸೇರಿಕೊಂಡು ಶಾಸಕರ ಅಸಮಾಧಾನ ಹೊಗಲಾಡಿಸಲು ಮುಂದಾಗಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಚಿಂತನೆ ನಡೆದಿದೆ. ಪಕ್ಷದ ಚಿಹ್ನೆಯಿಂದ ಗೆದ್ದಿರುವ ಶಾಸಕರು ಪುನರ್ ಆಲೋಚನೆ ಮಾಡಿ ಮುಂದಿನ ಹೆಜ್ಜೆಯಿಡಬೇಕಿದೆ. ಅಸಮಾಧಾನಗೊಂಡಿರುವ ಶಾಸಕರೆಲ್ಲಾ ವಾಪಸ್ಸು ಬರಬೇಕು. ನಿಮ್ಮ ಭಾವನೆಗಳಿಗೆ ಸ್ಪಂದಿಸುತ್ತೇವೆ ಎಂದು ಮನವಿ ಮಾಡಿದರು.