ಮಂಡ್ಯ: ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಧರಣಿ
ಮಂಡ್ಯ, ಜು.9: ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಅಲ್ಪಮತಕ್ಕೆ ಕುಸಿದಿರುವ ಮೈತ್ರಿ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮೂರು ದಿನದಿಂದ ರಾಜ್ಯದ ರಾಜಕಾರಣದಲ್ಲಿ ಕೋಲಾಹಲವಾಗಿದೆ. ಈ ಮೊದಲೇ ನಿಷ್ಕ್ರಿಯವಾಗಿದ್ದ ಮೈತ್ರಿ ಸರಕಾರವು ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಹಿನ್ನೆಡೆ ಅನುಭವಿಸಿತ್ತು ಎಂದು ಅವರು ಟೀಕಿಸಿದರು.
ಮುಖ್ಯಮಂತ್ರಿ ಮೇಲೆ ವಿಶ್ವಾಸವಿಲ್ಲದೆ ಸರಕಾರದ ಶಾಸಕರು, ಸಚಿವರು ರಾಜೀನಾಮೆ ನೀಡುತ್ತಿದ್ದಾರೆ. ಇದರಿಂದ ಮೈತ್ರಿ ಸರಕಾರ ಅಲ್ಪಮತಕ್ಕೆ ಕುಸಿದಿದೆ. ಆದ್ದರಿಂದ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಕೆ.ನಾಗಣ್ಣಗೌಡ, ಡಾ.ಸಿದ್ದರಾಮಯ್ಯ, ಕೆ.ಎಸ್.ನಂಜುಂಡೇಗೌಡ, ನೆರಳು ಕೃಷ್ಣ, ಜವರೇಗೌಡ, ಪರಮಾನಂದ, ಬಿ.ಕೃಷ್ಣ, ವಿಜಯಕುಮಾರ್, ಕೆ.ಎಲ್.ಆನಂದ, ಶಶಿಕಲಾ, ಮಲ್ಲಪ್ಪ, ಶಂಕರೇಗೌಡ, ಡಿ.ರಾಜು, ಅಶೋಕ್, ಅರವಿಂದ್, ಇತರರು ಭಾಗವಹಿಸಿದ್ದರು.