ಕುಮಾರಸ್ವಾಮಿ ಕೂಡಲೇ ರಾಜೀನಾಮೆ ನೀಡಲಿ: ಕೋಟಾ ಶ್ರೀನಿವಾಸ ಪೂಜಾರಿ
ಬೆಂಗಳೂರು, ಜು.11: ಮುಖ್ಯಮಂತ್ರಿ ಕುಮಾರಸ್ವಾಮಿ ಬಹುಮತ ಸಾಬೀತುಪಡಿಸುವ ಪ್ರಹಸನ ನಡೆಸದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ನ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ಡಾಲರ್ಸ್ ಕಾಲನಿಯಲ್ಲಿರುವ ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನಿಮಗೂ ಬಹುಮತ ಸಾಬೀತುಪಡಿಸುವ ವಿಶ್ವಾಸವಿಲ್ಲ, ನಿಮ್ಮ ಮೇಲೆ ನಮಗೂ ವಿಶ್ವಾಸವಿಲ್ಲ. ಆದುದರಿಂದಾಗಿ ನೀವು ಕೂಡಲೇ ರಾಜೀನಾಮೆ ನೀಡಿ ಎಂದು ಹೇಳಿದರು.
ರಾಜ್ಯದಲ್ಲಿ ಮೈತ್ರಿ ಸರಕಾರ ಸಂಪೂರ್ಣವಾಗಿ ಬಹುಮತ ಕಳೆದುಕೊಂಡಿದೆ. ಈ ಹಿಂದೆ ದೇವರಾಜ ಅರಸು, ರಾಮಕೃಷ್ಣ ಹೆಗಡೆ ಸೇರಿ ಹಲವು ಹಿರಿಯರು ಮುಖ್ಯಮಂತ್ರಿಯಾಗಿದ್ದ ವೇಳೆ ಬಹುಮತ ಸಿಗದ ಸಂದರ್ಭದಲ್ಲಿ ತಕ್ಷಣ ರಾಜೀನಾಮೆ ನೀಡಿದ್ದರು. ಹಾಗೆಯೇ, ಮುಖ್ಯಮಂತ್ರಿ ಕುಮಾರಸ್ವಾಮಿ ಇಷ್ಟಾದರೂ ಕುರ್ಚಿಗೆ ಅಂಟಿಕೊಂಟು ಕುಳಿತಿದ್ದಾರೆ ಎಂದ ಅವರು, ಬಹುಮತವನ್ನು ನಿಮ್ಮ ಸರಕಾರ ಕಳೆದುಕೊಂಡಿದೆ. ಕರ್ನಾಟಕದ ಗೌರವವನ್ನು ಎತ್ತಿ ಹಿಡಿಯಲು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಹೇಳಿದರು.
ವಿಧಾನಸಭಾಧ್ಯಕ್ಷರ ಕಣ್ಣೆದುರಿಗೆ ಶಾಸಕರ ಮೇಲೆ ದಬ್ಬಾಳಿಕೆ ನಡೆದಿದೆ. ಈ ಹಿನ್ನೆಲೆಯಲ್ಲಿ ನಮಗೆ ಆದರ್ಶ ಹೇಳಿಕೊಟ್ಟ ರಮೇಶ್ ಕುಮಾರ್ ರಾಜಧರ್ಮವನ್ನು ಪಾಲಿಸಬೇಕು. ಈ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವ್ಯವಸ್ಥೆಯಲ್ಲಿ ಶಾಸಕನೊಬ್ಬ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ. ಆದರೆ, ಸ್ಪೀಕರ್ ಕ್ಷೇತ್ರದ ಜನರ ಅಭಿಪ್ರಾಯ ಪಡೆದು ಅಂಗೀಕಾರ ಮಾಡುತ್ತೇವೆ ಎನ್ನುವುದು ಸರಿಯಲ್ಲ. ಹಾಗೆ ಮಾಡಿದ ಉದಾಹರಣೆ ಇದುವರೆಗೂ ನಡೆದಿಲ್ಲ ಎಂದರು.
ಸ್ಪೀಕರ್ ಯಾವುದೇ ಒತ್ತಡ್ಕಕೆ ಒಳಗಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಎಲ್ಲರ ರಾಜೀನಾಮೆಯನ್ನು ಅಂಗೀಕರಿಸಬೇಕು. ಆ ಮೂಲಕ ಸಂವಿಧಾನ, ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದಿದ್ದಾರೆ ಎನ್ನುವ ಕೀರ್ತಿಗೆ ನೀವು ಪಾತ್ರವಾಗಬೇಕು ಎಂದು ಕೋಟಾ ಪೂಜಾರಿ ತಿಳಿಸಿದರು.