ವಿಚಾರಣೆಗೆ ಗೈರು: ಕುತೂಹಲ ಸೃಷ್ಟಿಸಿದ ಮೂವರು ಅತೃಪ್ತ ಶಾಸಕರ ನಡೆ
ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು, ಜು.12: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರಾದ ನಾರಾಯಣ ಗೌಡ, ಆನಂದ್ ಸಿಂಗ್ ಹಾಗೂ ಪ್ರತಾಪ್ ಗೌಡ ಪಾಟೀಲ್ ಶುಕ್ರವಾರ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಎದುರು ವಿಚಾರಣೆಗೆ ಗೈರಾದರು.
ಜು.12ರಂದು ಮಧ್ಯಾಹ್ನ 2 ರಿಂದ 4 ಗಂಟೆ ನಡುವೆ ತಮ್ಮ ಎದುರು ವಿಚಾರಣೆಗೆ ಹಾಜರಾಗುವಂತೆ ಈ ಮೂವರು ಶಾಸಕರಿಗೆ ಸೂಚನೆ ನೀಡಲಾಗಿತ್ತು. ಆದರೆ, ಈ ಮೂವರು ಶಾಸಕರ ಪೈಕಿ ಯಾರೊಬ್ಬರೂ ವಿಚಾರಣೆಗೆ ಹಾಜರಾಗಲಿಲ್ಲ.
ಮಧ್ಯಾಹ್ನ 2 ಗಂಟೆಗೆ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್, 3 ಗಂಟೆಗೆ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಪ್ರತಾಪ್ ಗೌಡ ಪಾಟೀಲ್ ಹಾಗೂ ಸಂಜೆ 4 ಗಂಟೆಗೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ನಾರಾಯಣ ಗೌಡ ವಿಚಾರಣೆಗೆ ಸ್ಪೀಕರ್ ಸಮಯ ನಿಗದಿಗೊಳಿಸಿದ್ದರು.
ಶಾಸಕರು ವಿಚಾರಣೆಗೆ ಹಾಜರಾಗಬಹುದು ಎಂದು ಸ್ಪೀಕರ್ ತಮ್ಮ ಕಚೇರಿಯಲ್ಲಿ ವಿಚಾರಣೆಯ ಪ್ರಕ್ರಿಯೆಯನ್ನು ಚಿತ್ರೀಕರಿಸಿಕೊಳ್ಳಲು ವಿಡಿಯೋ ಕ್ಯಾಮೆರಾವನ್ನು ತರಿಸಿಕೊಂಡಿದ್ದರು. ಆದರೆ, 3.45ರ ವರೆಗೆ ಯಾವ ಶಾಸಕರು ತಮ್ಮ ಕಚೇರಿಗೆ ಆಗಮಿಸದೆ ಇದ್ದಿದ್ದರಿಂದ, ಅವರು ಕಲಾಪ ಸಲಹಾ ಸಮಿತಿ ಸಭೆಗೆ ತೆರಳಿದರು.