ಜು. 15 ರಂದು ಶಾಸಕರ ವಿರುದ್ಧ ರೈತ ಸಂಘದಿಂದ 'ಉಗಿಯುವ' ಚಳುವಳಿ
ಸಾಂದರ್ಭಿಕ ಚಿತ್ರ
ಶಿವಮೊಗ್ಗ, ಜು. 12: ಪ್ರಜಾಪ್ರಭುತ್ವವನ್ನ ಕಗ್ಗೊಲೆ ಮಾಡುತ್ತಿರುವ ಎಲ್ಲಾ ಶಾಸಕರಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ಉಗಿಯುವ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಜುಲೈ 15 ರಂದು ಬೆಳಿಗ್ಗೆ 10 ಗಂಟೆಗೆ ಶಿವಪ್ಪ ನಾಯಕ ವೃತ್ತದ ಬಳಿ ಈ ಚಳುವಳಿ ನಡೆಯಲಿದ್ದು ಶಾಸಕರಿಗೆ ಹಣ ಹಾಗೂ ಅಧಿಕಾರವೇ ಮೂಲವಾಗಿದೆ.
ಶಿವಪ್ಪ ನಾಯಕ ವೃತ್ತದ ಬಳಿ ಮೂರು ಪಕ್ಷಗಳ ಪ್ರತಿಕೃತಿ ದಹನದ ಜೊತೆಗೆ ರಾಜೀನಾಮೆ ನೀಡುವ ಶಾಸಕರ ವಿರುದ್ದ ಉಗಿಯುವ ಚಳುವಳಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಹಲವೆಡೆ ಪ್ರಸ್ತುತ ಬರಗಾಲ ಸ್ಥಿತಿಯಿದೆ. ಸರಿಯಾಗಿ ಮುಂಗಾರು ಮಳೆಯಾಗದ ಕಾರಣದಿಂದ ಜನ-ಜಾನುವಾರುಗಳು ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ಟ್ಯಾಂಕರ್ ಗಳ ಮೂಲಕ ನೀರು ಪೂರೈಸುವ ಸ್ಥಿತಿಯಿದೆ. ಕೃಷಿ ಚಟುವಟಿಕೆಯೂ ಪ್ರಗತಿಯಾಗಿಲ್ಲವಾಗಿದೆ. ರೈತರ ಸ್ಥಿತಿ ಶೋಚನೀಯವಾಗಿದೆ.
ಇಂತಹ ವಿಷಮ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನಡೆಸಬೇಕಾಗಿತ್ತು. ಆದರೆ ಶಾಸಕರ ರಾಜೀನಾಮೆ ಆಟದಿಂದ ಆಡಳಿತ ಯಂತ್ರ ಕುಸಿದಿದೆ. ನಾಗರೀಕರ ಸಮಸ್ಯೆಗಳನ್ನು ಕೇಳುವವರೇ ಇಲ್ಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇವಲ ಅಧಿಕಾರ ದಾಹದಿಂದ ಶಾಸಕರು ನಾಟಕ ಮಾಡುತ್ತಿದ್ದಾರೆ. ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ರಾಜೀನಾಮೆ ನೀಡದ ಶಾಸಕರು, ಅವರ ಅನುಕೂಲ ಹಾಗೂ ಸ್ವಾರ್ಥಕ್ಕೆ ರಾಜೀನಾಮೆ ನೀಡುತ್ತಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ ಎಂದು ದೂರಿದರು.
ಪ್ರಸ್ತುತ ರಾಜೀನಾಮೆ ನೀಡಿರುವ ಶಾಸಕರ ರಾಜೀನಾಮೆಗಳನ್ನು ಅಂಗೀಕರಿಸಿ, ಅವರ ವಿರುದ್ದ ಚುನಾವಣೆಯಲ್ಲಿ ಸೋತ ಎರಡನೇ ಅಭ್ಯರ್ಥಿಯನ್ನು ಶಾಸಕನನ್ನಾಗಿ ಆಯ್ಕೆ ಮಾಡಬೇಕು. ಅಥವಾ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಬಿಗಿಗೊಳಿಸಬೇಕು ಎಂದು ಅವರು ತಿಳಿಸಿದರು.
ಜುಲೈ 21 ರಂದು ನರಗುಂದ ಹಾಗೂ ನವಲಗುಂದದ 39 ನೇ ವರ್ಷದ ಹುತಾತ್ಮರ ದಿನಾಚರಣೆ ಅಂಗವಾಗಿ ರಾಜ್ಯದಲ್ಲಿ ಸಮಗ್ರ ನೀರಾವರಿ ಯೋಜನೆಗಳು ಜಾರಿ ಮಾಡದ ಸರ್ಕಾರಗಳ ವಿರುದ್ದ ರೈತರ ಬೃಹತ್ ಸಮಾವೇಶವನ್ನ ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.