ಮುಂಬೈಗೆ ಹೋಗುತ್ತಿದ್ದೇನೆ ಎಂಬುದು ಕೇವಲ ಕಪೋಲಕಲ್ಪಿತ: ಶಾಸಕ ರಾಮಲಿಂಗಾರೆಡ್ಡಿ
ಬೆಂಗಳೂರು, ಜು. 15: ನಾನು ಮುಂಬೈಗೆ ಹೋಗುತ್ತಿದ್ದೇನೆ ಎಂಬುದು ಕೇವಲ ಕಪೋಲಕಲ್ಪಿತ. ಕೆಲವರು ಹಬ್ಬಿಸುವ ಗಾಳಿ ಸುದ್ದಿಗೆ ಯಾರೂ ಕಿವಿಗೊಡಬಾರದು ಎಂದು ಬಿಟಿಎಂ ಲೇಔಟ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಕೆಲವರು ಅನಗತ್ಯವಾಗಿ ನಾನು ಮುಂಬೈಗೆ ಹೋಗುತ್ತಿದ್ದೇನೆ ಎಂದು ಸತ್ಯಕ್ಕೆ ದೂರವಾದ ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ, ನಾನು ಬೆಂಗಳೂರಲ್ಲೇ ಇದ್ದೇನೆ. ಮುಂಬೈ ಸೇರಿದಂತೆ ನಾನು ಎಲ್ಲಿಗೂ ಹೋಗುವುದಿಲ್ಲ ಎಂದು ಅಧಿಕೃತ ಪ್ರಕಟಣೆಯಲ್ಲಿ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ವಿಚಾರಣೆಗೆ ಗೈರು: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಶಾಸಕರ ಪೈಕಿ ರಾಮಲಿಂಗಾರೆಡ್ಡಿ ಹಾಗೂ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಗೋಪಾಲಯ್ಯ ಅವರನ್ನು ವಿಚಾರಣೆಗೆ ಸ್ಪೀಕರ್ ಕರೆದಿದ್ದರೂ, ಇಬ್ಬರೂ ಅನಿವಾರ್ಯ ಕಾರಣಗಳಿಂದ ವಿಚಾರಣೆಗೆ ಹಾಜರಾಗಿಲ್ಲ.
ರಾಮಲಿಂಗಾ ರೆಡ್ಡಿ ಅವರು ಖುದ್ದು ಸ್ಪೀಕರ್ ರಮೇಶ್ಕುಮಾರ್ ಅವರಿಗೆ ಕರೆ ಮಾಡಿ ವಿಚಾರಣೆಗೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಂಗಳವಾರ ಅಥವಾ ಬುಧವಾರ ವಿಚಾರಣೆಗೆ ಹಾಜರಾಗಲಿದ್ದೇನೆ ಎಂದು ಕೋರಿದ್ದಾರೆಂದು ತಿಳಿದು ಬಂದಿದೆ.
ಮುಂಬೈನಲ್ಲಿ ಬೀಡುಬಿಟ್ಟಿರುವ ಕೆ.ಗೋಪಾಲಯ್ಯ ಅವರು ಕೂಡ ವಿಧಾನಸಭೆ ಕಾರ್ಯದರ್ಶಿಗೆ ದೂರವಾಣಿ ಕರೆ ಮಾಡಿದ್ದು, ತಾನು ಗೈರು ಹಾಜರಾಗಲಿದ್ದೇನೆ ಎಂದು ಮಾಹಿತಿ ನೀಡಿದ್ದಾರೆಂದು ಹೇಳಲಾಗಿದೆ. ಮುಂದಿನ ದಿನಾಂಕವನ್ನು ಸ್ಪೀಕರ್ ನಿಗದಿಪಡಿಸಬೇಕಿದೆ.