ಧಗಧಗನೆ ಉರಿದ ಡೀಸೆಲ್ ಟ್ಯಾಂಕರ್
ಮಂಡ್ಯ, ಜು.18: ಡೀಸೆಲ್ ಟ್ಯಾಂಕರ್ ಗೆ ಆಕಸ್ಮಿಕ ಬೆಂಕಿ ತಗುಲಿ ಧಗಧಗನೆ ಹೊತ್ತಿ ಉರಿದ ಘಟನೆ ಕೆ.ಆರ್.ಪೇಟೆ ತಾಲೂಕಿನ ಚಿಕ್ಕೋನಹಳ್ಳಿ ಗ್ರಾಮದ ಹೊರವಲಯದ ಬಳಿ ನಡೆದಿದೆ.
ಲಾರಿಯ ಕ್ಯಾಬಿನ್ನಲ್ಲಿ ಶಾರ್ಟ್ ಸರ್ಕ್ಯೂನಿಂದ ಬೆಂಕಿ ಹೊತ್ತಿಕೊಂಡಾಗ ಲಾರಿಯ ಚಾಲಕ ಸಂಗಣ್ಣ ಸಮಯ ಪ್ರಜ್ಞೆಯಿಂದ ಕೆ.ಆರ್.ಪೇಟೆಯ ಅಗ್ನಿಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮಾಡಿ ಬೆಂಕಿ ನಂದಿಸಿ ಅಪಾರ ಹಾನಿ ತಪ್ಪಿಸಿದರು. ಡೀಸೆಲ್ ಟ್ಯಾಂಕರ್ ಕೆ.ಆರ್.ಪೇಟೆ ತಾಲೂಕಿನಲ್ಲಿನ ಹೇಮಾವತಿ ಜಲಾಶಯ ಯೋಜನೆಯ ನಾಲೆಗಳ ಆಧುನೀಕರಣ ಕಾಮಗಾರಿ ನಡೆಸುತ್ತಿರುವ ಉಪ್ಪಾರ್ ಕ್ಯಾಂಪ್ ವಾಹನಗಳಿಗೆ ಡೀಸೆಲ್ ಕೊಂಡೊಯ್ಯುತ್ತಿತ್ತು ಎನ್ನಲಾಗಿದೆ.
ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಅಪಾಯ ತಪ್ಪಿಸಿದ ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Next Story