ಸಿಎಂ ಆರೋಪ ಸಾಬೀತು ಮಾಡಿದರೆ ನೇಣಿಗೇರಲು ಸಿದ್ಧ: ಬಿಜೆಪಿ ಶಾಸಕ ರೇಣುಕಾಚಾರ್ಯ
ಬೆಂಗಳೂರು, ಜು.20: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸದನದಲ್ಲಿ ಮಾಡಿದ ಆರೋಪ ಸಾಬೀತು ಮಾಡಿದರೆ ಬಹಿರಂಗವಾಗಿ ನೇಣಿಗೆ ಶರಣಾಗುತ್ತೇನೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಶನಿವಾರ ನಗರದ ರೆಸಾರ್ಟ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ನಿಮ್ಮ ಸಹಾಯದಿಂದ ಸಚಿವನಾಗಿಲ್ಲ. ನಾನು ಯಡಿಯೂರಪ್ಪ ಅವರ ನೆರವಿನಿಂದ ಮಂತ್ರಿಯಾಗಿದ್ದೆ. ಗೋವಾದಲ್ಲಿ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಿರಿ, ಇದು ಸಾಬೀತಾದರೆ ನಾನು ಬಹಿರಂಗವಾಗಿ ನೇಣಿಗೆ ಶರಣಾಗುತ್ತೇನೆ ಎಂದು ಸವಾಲು ಹಾಕಿದರು.
ನಮ್ಮನ್ನ ಕುಮಾರಸ್ವಾಮಿ ಗೋವಾ ಹಾಗೂ ಹೈದರಾಬಾದ್ಗೆ ಬಂದು ಮಧ್ಯರಾತ್ರಿ ಭೇಟಿ ಮಾಡಿದ್ದರು. ನಾವು ಅವರನ್ನು ಆಹ್ವಾನ ಮಾಡಿರಲಿಲ್ಲ. ಗೋವಾದಲ್ಲಿ ಮಧ್ಯರಾತ್ರಿ ಎರಡೂವರೆ ಗಂಟೆಯವರೆಗೆ ಸಂಧಾನ ಮಾಡಿದ್ದರು. ಆದರೂ ನಾವು ಮಣಿಯಲಿಲ್ಲ. ನಾವು ಯಡಿಯೂರಪ್ಪ ಅವರ ವಿರುದ್ಧ ಬಂದಿಲ್ಲ, ಪಕ್ಷದ ವಿರುದ್ಧ ಬಂದಿಲ್ಲ ಎಂದು ಹೇಳಿದ್ದೆ ಎಂದು ತಿಳಿಸಿದರು.
ನಮ್ಮನ್ನು ಉದ್ವೇಗಗೊಳಿಸುವ ಉದ್ದೇಶದಿಂದಲೆ ಸಿಎಂ ಕುಮಾರಸ್ವಾಮಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಈ ವಿಚಾರವಾಗಿ ತಾವು ನಂಬಿದ ಶೃಂಗೇರಿ ಮತ್ತು ಮಂಜುನಾಥ್ ಸನ್ನಿಧಿಗೆ ಬನ್ನಿ ಪ್ರಮಾಣ ಮಾಡಿ. ಇಲ್ಲವಾದರೆ ಬಹಿರಂಗವಾಗಿ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ಗೌಡರ ಕುಟುಂಬಕ್ಕೆ ಡಾಕ್ಟರೇಟ್ ನೀಡಬೇಕು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಸುಳ್ಳು ಹೇಳುವುದರಲ್ಲಿ ಮೊದಲನೆ ಸ್ಥಾನದಲ್ಲಿರುತ್ತಾರೆ. ಅವರ ನಾಟಕಕ್ಕೆ ಒಂದು ಡಾಕ್ಟರೇಟ್ ನೀಡಬೇಕು. ಮುಂದಿನ ಅಧಿವೇಶನದಲ್ಲಿ ನಿಮ್ಮ ಆರೋಪಗಳಿಗೆ ತಕ್ಕ ಉತ್ತರ ನೀಡುತ್ತೇನೆ ಎಂದು ಹೇಳಿದರು.