ಎಸ್ಟಿ ಮಿಸಲಾತಿ ಪ್ರಮಾಣ ಹೆಚ್ಚಳ: ನ್ಯಾ.ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗ ರಚನೆ
ನ್ಯಾ.ನಾಗಮೋಹನ್ ದಾಸ್
ಬೆಂಗಳೂರು, ಜು. 22: ಪರಿಶಿಷ್ಟ ಪಂಗಡ(ಎಸ್ಟಿ)ದವರಿಗೆ ಪ್ರಸ್ತುತ ನೀಡುತ್ತಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಸಮಗ್ರ ಅಧ್ಯಯನ ನಡೆಸಿ, ಎರಡು ತಿಂಗಳೊಳಗಾಗಿ ವರದಿ ಸಲ್ಲಿಸಲು ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚಿಸಲಾಗಿದೆ.
ಪರಿಶಿಷ್ಟ ಜಾತಿಗಳಿಗೆ ಈಗಿರುವ ಶೇ.15ರ ಮೀಸಲಾತಿಯನ್ನು ಅವರ ಜನಸಂಖ್ಯೆಗೆ ಹೋಲಿಸಿದರೆ ಪ್ರತಿಶತ ಎರಡರಷ್ಟು ಮೀಸಲಾತಿ ಕಡಿಮೆ ಇರುತ್ತದೆ. ಅದೇ ರೀತಿ ಪರಿಶಿಷ್ಟ ಪಂಗಡದವರಿಗೆ ಈಗಿರುವ ಶೇ.3 ಪ್ರತಿಶತ ಮೀಸಲಾತಿಯನ್ನು ಅವರ ಜನಸಂಖ್ಯೆಗೆ ಹೋಲಿಸಿದರೆ ಪ್ರತಿಶತ 4ರಷ್ಟು ಕಡಿಮೆ ಇರುತ್ತದೆ. ಆದುದರಿಂದ ಎಸ್ಸಿ-ಎಸ್ಟಿ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿಯನ್ನು ಹೆಚ್ಚಿಸಬೇಕೆಂಬ ಒತ್ತಡ ಸರಕಾರದ ಮೇಲಿತ್ತು.
ಪರಿಶಿಷ್ಟ ಪಂಗಡದಲ್ಲಿರುವ ನಾಯಕ ಸಮುದಾಯದ ಜನಪ್ರತಿನಿಧಿಗಳು ಮತ್ತು ಕರ್ನಾಟಕ ನಾಯಕ ಸ್ಟೂಡೆಂಟ್ ಫೆಡರೇಶನ್ ಸಮುದಾಯದ ಜನಸಂಖ್ಯೆ 2011ರ ಜನಗಣತಿಯಂತೆ ಶೇ.6.95 ಇದ್ದರೂ ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಿಗೆ ಪ್ರಸ್ತುತ ಕೇವಲ ಶೇ.3 ಮೀಸಲಾತಿ ಇರುವುದರಿಂದ, ಈ ಜನಾಂಗ ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಿಂದ ವಂಚಿತರಾಗಿ ಅನ್ಯಾಯಕ್ಕೆ ಒಳಗಾಗಿರುವುದರಿಂದ, ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆ ಆಧಾರದ ಮೇಲೆ ಹೆಚ್ಚಿಸಬೇಕೆಂದು ಒತ್ತಾಯ ಮಾಡಿದ್ದರು.
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿ ನೇತೃತ್ವದಲ್ಲಿ ಮೀಸಲಾತಿ ಹೆಚ್ಚಿಸುವ ಬಗ್ಗೆ ಜೂನ್ 25ರಂದು ನಾಯಕ ಸಮಾಜದ ಮುಖಂಡರೊಂದಿಗೆ ಧರಣಿ ನಡೆಸಿದ್ದು, ಸ್ಥಳಕ್ಕೆ ಉಪಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವರು ಹಾಗೂ ಅರಣ್ಯ ಸಚಿವರು ಭೇಟಿ ನೀಡಿ, ಸಮುದಾಯದ ಬೇಡಿಕೆಗಳ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಸರಕಾರಕ್ಕೆ ಸಲ್ಲಿಸಲಾಗಿರುವ ಬೇಡಿಕೆಗಳನ್ನು ಪರಿಶೀಲಿಸಿ, ಸಮಗ್ರ ಅಧ್ಯಯನ ನಡೆಸಿ, ವರದಿ ನೀಡುವ ಸಲುವಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸರಕಾರ ಪರಿಶೀಲನಾ ಆಯೋಗವನ್ನು ರಚಿಸಿದೆ ಎಂದು ಪ್ರಕಟಣೆ ತಿಳಿಸಿದೆ.