ರೇಣುಕಾಚಾರ್ಯಗೆ ಝಮೀರ್ ಅಹ್ಮದ್ ತಿರುಗೇಟು
ಬೆಂಗಳೂರು, ಜು.25: ಬಿಜೆಪಿ ಶಾಸಕ ರೇಣುಕಾಚಾರ್ಯ ಅವರೇ ಸಿದ್ದರಾಮಯ್ಯನವರ ವರ್ಚಸ್ಸಿನ ಚಿಂತೆ ಬಿಡಿ. ಹಿಂದೆ ಯಡಿಯೂರಪ್ಪನವರ ವಿರುದ್ಧ ನೀವು ಬಂಡೆದ್ದಾಗ ಯಾವ ವರ್ಚಸ್ಸು ಅವರನ್ನು ಬಿಟ್ಟು ಹೋಗಿತ್ತು? ನೀವೀಗ ಮತ್ತೆ ಯಡಿಯೂರಪ್ಪರನ್ನು ಸೇರಿಸಿಕೊಂಡ ಮೇಲೆ ಯಾವ ವರ್ಚಸ್ಸು ಅವರಿಗೆ ಮರಳಿ ಬಂದಿದೆ? ದಯವಿಟ್ಟು ಉತ್ತರಿಸುವಿರೇ? ಎಂದು ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಟ್ವೀಟರ್ನಲ್ಲಿ ತಿರುಗೇಟು ನೀಡಿದ್ದಾರೆ.
ಕುಂದಗೋಳ ಉಪ ಚುನಾವಣೆ ಸಂದರ್ಭದಲ್ಲಿ ಮೇ 23ರೊಳಗೆ ಬಿಜೆಪಿ ಸರಕಾರ ರಚಿಸಿದರೆ ಯಡಿಯೂರಪ್ಪನವರ ಮನೆ ಗೇಟ್ ಕಾಯುತ್ತೇನೆ ಎಂಬ ನನ್ನ ಸವಾಲನ್ನು ಸ್ವೀಕರಿಸುವ ಧೈರ್ಯ ತೋರದ ಬಿಜೆಪಿ ನಾಯಕರು ಎರಡು ತಿಂಗಳ ನಂತರ ಹಳೆ ವಿಡಿಯೋವನ್ನು ಹರಿಬಿಟ್ಟು ವಿಕೃತಾನಂದ ಪಡುತ್ತಿರುವ ಬಗ್ಗೆ ನನಗೆ ಅನುಕಂಪವಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಮೇ 23ರೊಳಗೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಬೇಕೆಂಬ ನನ್ನ ಸವಾಲನ್ನು ಸ್ವೀಕರಿಸಿ ಗೆದ್ದಿದ್ದರೆ ಒಂದು ದಿನವಲ್ಲ, ಒಂದು ತಿಂಗಳು ಅವರ ಮನೆ ಗೇಟ್ ಕಾಯುತ್ತಿದ್ದೆ. ಇಷ್ಟೆಲ್ಲ ಕಸರತ್ತು ನಡೆಸಿ ಮುಖ್ಯಮಂತ್ರಿಯಾದರೂ ಎಷ್ಟು ದಿನ ಕುರ್ಚಿಯಲ್ಲಿರುತ್ತೀರಿ ಎನ್ನುವುದಕ್ಕೆ ಗ್ಯಾರಂಟಿ ಇದೆಯೇನ್ರಿ ಸಾಹೇಬರೇ ಎಂದು ಝಮೀರ್ ಅಹ್ಮದ್ ಖಾನ್ ಸವಾಲು ಹಾಕಿದ್ದಾರೆ.