ಮರಕ್ಕೆ ಕಾರು ಢಿಕ್ಕಿ: ಇಬ್ಬರು ಹಜ್ ಯಾತ್ರಾರ್ಥಿಗಳು ಸೇರಿ 7 ಮಂದಿ ಮೃತ್ಯು
ಧಾರವಾಡ, ಜು.31: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ ಢಿಕ್ಕಿಯಾದ ಪರಿಣಾಮ ಮೂರು ಮಕ್ಕಳು ಸೇರಿ ಒಂದೇ ಕುಟುಂಬದ 7 ಮಂದಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕಾಶೀಳ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಘಟನೆಯಲ್ಲಿ ಓರ್ವನಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಜ್ ಯಾತ್ರೆಗೆ ತೆರಳುತ್ತಿದ್ದವರನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಹೋಗುವ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಮೃತರನ್ನು ನಿಝಾಮುದ್ದೀನ್ ಅಬ್ದುಲ್ ನಬಿ ಸೌದಗಾರ್ (69), ಸಫೂರ ನಿಝಾಮುದ್ದೀನ್ ಸೌದಗಾರ್ (58), ಮನ್ಸೂಪ್ (40), ನಫೀಸಾ (35) ಅಕ್ಸಾ (4) ಅಹ್ಮದ್ ರಝಾ (2), ತಯಬ್ಬಾ (6) ಎಂದು ಗುರುತಿಸಲಾಗಿದೆ.
ನಿಝಾಮುದ್ದೀನ್ ಸೌದಗಾರ್ ಹಾಗೂ ಸಫೂರ ನಿಝಾಮುದ್ದೀನ್ ಸೌದಗಾರ್ ಹಜ್ ಗೆ ತೆರಳುತ್ತಿದ್ದು, ಅವರನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಹೋಗುವ ವೇಳೆ ಘಟನೆ ಸಂಭವಿಸಿದೆ. ಘಟನೆಯಲ್ಲಿ ಅವರೂ ಕೂಡಾ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಕಾಶೀಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.