ಲಿಂಗಾಯತ ಧರ್ಮ ಸರಿಪಡಿಸಲು ಹೋಗುತ್ತಿಲ್ಲ: ಪೇಜಾವರ ಶ್ರೀ
ಮೈಸೂರು,ಆ.2: ನಾನು ಲಿಂಗಾಯತ ಧರ್ಮವನ್ನು ಸರಿಪಡಿಸಲು ಹೋಗುತ್ತಿಲ್ಲ. ಸ್ನೇಹ ಮತ್ತು ಸೋದರತ್ವದಿಂದ ನಮ್ಮಲ್ಲೇ ಇರಿ ಎಂದು ಹೇಳುತ್ತಿದ್ದೇನೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಪೇಜಾವರ ವಿಶ್ವೇಶ್ವರತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಎಂ.ಬಿ.ಪಾಟೀಲ್ ಉದ್ವೇಗದಿಂದ ಮಾತನಾಡುತ್ತಿದ್ದಾರೆ. ನಾನು ಲಿಂಗಾಯತ ಧರ್ಮದ ವಿಚಾರವಾಗಿ ಚರ್ಚೆ ಮಾಡಲು ಪಂತಾಹ್ವಾನ ನೀಡಿಲ್ಲ, ಎಲ್ಲರಿಗೂ ಚರ್ಚೆಗೆ ಸ್ನೇಹದಿಂದ ಆಹ್ವಾನ ನೀಡಿದ್ದೇನೆ. ಲಿಂಗಾಯತರು ಬೇರೆಯಲ್ಲ, ವೀರಶೈವರು ಬೇರೆಯಲ್ಲ, ಎಲ್ಲರನ್ನೂ ಒಗ್ಗೂಡಿಸುವ ಕೆಲಸ ನಡೆಯುತ್ತಿದೆ. ನಾನು ಅವರಲ್ಲಿ ಹುಳುಕು ಹಿಂಡಿಲ್ಲ, ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದೇನೆ. ಯಾರು ಶಿವನನ್ನು ಪೂಜಿಸುತ್ತಾರೋ ಅವರೆಲ್ಲಾ ಹಿಂದೂಗಳೆ ಎಂದು ಹೇಳಿದರು.
ಬಸವಣ್ಣ ನವರ ಬಗ್ಗೆ ನಮಗೆ ಅಪಾರ ಗೌರವವಿದೆ. ನಾನು ಆದೇಶ ನೀಡಿಲ್ಲ, ಸಲಹೆಯಷ್ಟೇ ನೀಡಿದ್ದೇನೆ ಎಂದು ಹೇಳಿದರು.
ಲಿಂಗಾಯತ ಧರ್ಮದ ವಿಚಾರವಾಗಿ ಚರ್ಚೆಗೆ ಮೈಸೂರಿಗೆ ಎಸ್.ಎಂ.ಜಾಮದಾರ್, ಎಂ.ಬಿ.ಪಾಟೀಲ್ ಮತ್ತು ಸಾಣೇಹಳ್ಳಿ ಸ್ವಾಮೀಜಿ ಚರ್ಚೆಗೆ ಬರಲಿ ಎಂದು ಪೇಜಾವರ ಶ್ರೀ ಆಹ್ವಾನ ನೀಡಿದ್ದು. ಇದಕ್ಕೆ ಪ್ರತಿಕ್ರಿಯಿಸಿರುವ ಎಂ.ಬಿ.ಪಾಟೀಲ್ ಪ್ರತ್ಯೇಕ ಲಿಂಗಾಯತ ಧರ್ಮ ಬೇಕು ಎಂದು ನಾವು ಹೋರಾಟ ಮಾಡುತ್ತಿದ್ದರೆ ಪೇಜಾವರ ಶ್ರೀ ವಿರೋಧಿಸುತ್ತಿದ್ದಾರೆ. ಅವರಿಗೆ ಬಸವಣ್ಣನವರ ಬಗ್ಗೆ ಗೌರವವಿಲ್ಲ ಎಂದು ಹೇಳಿಕೆ ನೀಡಿದ್ದರು.