ಪ್ರಜ್ವಲ್ ರೇವಣ್ಣ ಜನ್ಮದಿನಾಚರಣೆಗೆ ರಸ್ತೆ ಬಂದ್: ಸಾರ್ವಜನಿಕರಿಗೆ ಕಿರಿಕಿರಿ, ಆಕ್ರೋಶ
ಹಾಸನ, ಆ.5: ಸಂಸದ ಪ್ರಜ್ವಲ್ ರೇವಣ್ಣ ಜನ್ಮದಿನಕ್ಕೆ ನಗರದ ಮಹಾವೀರ ವೃತ್ತದಿಂದ ಹೇಮಾವತಿ ಪ್ರತಿಮೆವರೆಗೂ ಒಂದು ಭಾಗದ ರಸ್ತೆಯನ್ನೇ ಬಂದ್ ಮಾಡಿ ಶಾಮಿಯಾನ ಹಾಕಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸಾರ್ವಜನಿಕರ ಕಿರಿಕಿರಿ ಉಂಟಾದ ಪರಿಣಾಮ ಆಕ್ರೋಶಕ್ಕೆ ಕಾರಣವಾಗಿದೆ.
ಸೋಮವಾರ ಬೆಳಿಗ್ಗೆಯೇ ಮಹಾವೀರ ವೃತ್ತದಿಂದ ಹೇಮಾವತಿ ಪ್ರತಿಮೆವರೆಗೂ ರಸ್ತೆ ಬಂದ್ ಮಾಡಿ ಬೃಹತ್ ಶಾಮಿಯಾನ ಹಾಕಲಾಗಿತ್ತು. ಆದರೆ ಸಂಜೆ 5 ಗಂಟೆಯಾದರೂ ಪ್ರಜ್ವಲ್ ಆಗಮಿಸಲಿಲ್ಲ. ಅಲ್ಲಿವರೆಗೂ ಈ ಭಾಗದಲ್ಲಿ ಓಡಾಡುವ ವಾಹನಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಹರಸಾಹಸಪಡಬೇಕಾಯಿತು. ರಸ್ತೆ ಮಧ್ಯೆ ಸಾವಿರಾರು ಖಾಲಿ ಖುರ್ಚಿಗಳು ಹಾಕಿ ಬೆಳಗಿನಿಂದ ಸಂಜೆವರೆಗೂ ಇದ್ದವು. ಆದರೆ ಸಂಜೆ 5 ಗಂಟೆ ನಂತರವಷ್ಟೇ ಕಾರ್ಯಕ್ರಮ ಜರುಗಿದೆ. ಹೀಗಾಗಿ ಬೆಳಗಿನಿಂದ ಸಂಜೆವರೆಗೂ ರಸ್ತೆ ಮಧ್ಯೆ ಶಾಮಿಯಾನ ಹಾಕಲು ಅವಕಾಶ ಕೊಟ್ಟಿರುವ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೂರವಾಣಿ ಮೂಲಕ ಪತ್ರಕರ್ತರೊಂದಿಗೆ ಮಾತನಾಡಿದ ನಗರಸಭೆ ಆಯುಕ್ತ ಪರಮೇಶ್, ಲೋಕಸಭಾ ಸದಸ್ಯರ ಜನ್ಮದಿನದ ಅಂಗವಾಗಿ ಜೆಡಿಎಸ್ ಕಾರ್ಯಕರ್ತರು ಶುಭಾಶಯ ಕೋರಲು ಬಟ್ಟೆ, ಬ್ಯಾನರ್ ಅಳವಡಿಸಲು ಅನುಮತಿ ಕೋರಿದ್ದಾರೆ. ಜನ್ಮದಿನ ಕಾರ್ಯಕ್ರಮ ಆಚರಣೆ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಡದ ರೀತಿಯಲ್ಲಿ ಆಯೋಜಿಸಬೇಕು. ಧಕ್ಕೆ ಕಂಡು ಬಂದಲ್ಲಿ ಆಯೋಜಕರು ಹೊಣೆಯಾಗುತ್ತಾರೆ. ಈ ಕಾರ್ಯಕ್ರಮಕ್ಕೆ ಸಮಯವನ್ನು ನಿಗದಿಪಡಿಸಿಲ್ಲ. ಒಂದು ದಿನದ ಮಟ್ಟಿಗೆ ಎಂದು ಹೇಳಲಾಗಿದೆ ಎಂದು ತಿಳಿಸಿದರು.