ಕಾಶ್ಮೀರದಲ್ಲಿ ವಿಧಿ 370 ರದ್ದುಪಡಿಸಿರುವ ಕೇಂದ್ರದ ಕ್ರಮಕ್ಕೆ ರಾಜ್ಯದ ಕಾಂಗ್ರೆಸ್ ಶಾಸಕಿ ಬೆಂಬಲ
ಬೆಂಗಳೂರು, ಎ.7: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ವಿಧಿ 370ನ್ನು ರದ್ದುಪಡಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಬೆಳಗಾವಿಯ ಖಾನಾಪುರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಟ್ವೀಟರ್ನ ಮೂಲಕ ಸ್ವಾಗತಿಸಿದ್ದಾರೆ.
ವಿಧಿ 370 ಒಂದು ಹತಾಶೆಯ ಅಳತೆಗೋಲು. ವಿಶೇಷ ಸೌಲಭ್ಯಗಳು 70 ವರ್ಷಗಳ ಕಾಲ ದೇಶವನ್ನು ಹತಾಶೆಯಲ್ಲಿಟ್ಟಿದೆ ಎಂದು ನಿಂಬಾಳ್ಕರ್ ಟ್ವೀಟ್ ಮಾಡಿದ್ದಾರೆ.
ನಿಂಬಾಳ್ಕರ್ ಅವರ ಅಭಿಪ್ರಾಯಕ್ಕೆ ಹಲವರು ಪ್ರತಿಕ್ರಿಯಿಸಿದ್ದು, ನೀವು ಕಾಂಗ್ರೆಸ್ನ್ನು ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಿ ಎಂದು ಸಲಹೆ ನೀಡಿದ್ದಾರೆ.
ಸರಿಯಾದ ನಿರ್ಧಾರ. ಆದರೆ, ನೀವು ಮಾತ್ರ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಬೇಕು ಎಂದು ಇನ್ನೋರ್ವ ಟ್ವೀಟ್ ಮಾಡಿದ್ದಾನೆ.
ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾದಾಗ ಅಂಜಲಿ ಕಾಂಗ್ರೆಸ್ನ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದರು. ಆಗ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆಂಬ ಮಾತು ಕೇಳಿಬಂದಿತ್ತು. ಆದರೆ, ಕಾಂಗ್ರೆಸ್ ತ್ಯಜಿಸುವ ಮಾತನ್ನು ನಿರಾಕರಿಸಿದ್ದ ಅಂಜಲಿ, ಅನಾರೋಗ್ಯದಿಂದಾಗಿ ಪಕ್ಷದ ಸಭೆಗೆ ಹಾಜರಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.