ಶಿವಮೊಗ್ಗ: ವಿದ್ಯುತ್ ಅಘಾತಕ್ಕೆ ರೈತ ಬಲಿ, ಮರದ ಕೊಂಬೆ ಬಿದ್ದು ಬೈಕ್ ಚಾಲಕನಿಗೆ ಗಾಯ
ನದಿಯಲ್ಲಿ ತೇಲಿ ಹೋಗುತ್ತಿರುವ ವ್ಯಕ್ತಿಯ ವೀಡಿಯೋ ವೈರಲ್
ಶಿವಮೊಗ್ಗ, ಆ. 7: ಜಿಲ್ಲೆಯಲ್ಲಿ ಮಳೆ ಸಂಬಂಧಿತ ಅನಾಹುತಗಳು ಮುಂದುವರಿದಿವೆ. ಶಿಕಾರಿಪುರ ತಾಲೂಕಿನಲ್ಲಿ ವಿದ್ಯುತ್ ಶಾಕ್ನಿಂದ ರೈತರೋರ್ವರು ಮೃತಪಟ್ಟಿದ್ದಾರೆ. ಸಾಗರ ತಾಲೂಕಿನಲ್ಲಿ ಮರದ ಕೊಂಬೆ ಬಿದ್ದು ಬೈಕ್ ಚಾಲಕ ಗಾಯಗೊಂಡಿದ್ದಾನೆ. ಮತ್ತೊಂದೆಡೆ ಶಿವಮೊಗ್ಗ ನಗರದ ತುಂಗಾ ನದಿಯಲ್ಲಿ ವ್ಯಕ್ತಿಯೋರ್ವರು ತೇಲಿ ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ಗ್ರಾಮದ ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ರೈತ ಲೋಕೇಶ್ (45) ಎಂಬುವರು ಮೃತಪಟ್ಟ ಘಟನೆ ವರದಿಯಾಗಿದೆ. ಮಳೆಯಿಂದ ತೋಟದಲ್ಲಿ ವಿದ್ಯುತ್ ತಂತಿ ತುಂಡರಿಸಿ ಬಿದ್ದಿದ್ದು, ತೋಟಕ್ಕೆ ಆಗಮಿಸಿದ ಲೋಕೇಶ್ರವರಿಗೆ ವಿದ್ಯುತ್ ಶಾಕ್ ಉಂಟಾಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ಸಾಗರ ತಾಲೂಕಿನ ಆನಂದಪುರದ ಕೋರ್ಲಿಕೊಪ್ಪ ಮಾರ್ಗದಲ್ಲಿ, ಬೈಕ್ನಲ್ಲಿ ತೆರಳುತ್ತಿದ್ದ ಯೋಗೇಂದ್ರ (44) ಎಂಬುವರ ಮೇಲೆ ಮರದ ಕೊಂಬೆಯೊಂದು ಬಿದ್ದು ಗಾಯಗೊಂಡಿದ್ದಾರೆ. ಇವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ವೈರಲ್: ಶಿವಮೊಗ್ಗ ನಗರದಲ್ಲಿ ತುಂಬಿ ಹರಿಯುತ್ತಿರುವ ತುಂಗಾ ನದಿಯಲ್ಲಿ ವ್ಯಕ್ತಿಯೋರ್ವರು ಕೈಗಳನ್ನು ಮೇಲಕ್ಕೆತ್ತಿ ತೇಲಿ ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವ್ಯಕ್ತಿ ಈಜಾಡಲು ನದಿಗೆ ಇಳಿದಿದ್ದರೇ ಅಥವಾ ಕೊಚ್ಚಿ ಹೋಗುತ್ತಿದ್ದಾರೆಯೇ ಎಂಬುವುದು ತಿಳಿದುಬಂದಿಲ್ಲ. ಈ ದೃಶ್ಯ ಯಾವಾಗ ಸೆರೆ ಹಿಡಿಯಲಾಗಿದೆ ಎಂಬುವುದು ಕೂಡ ಸ್ಪಷ್ಟವಾಗಿಲ್ಲ.