ನೆರೆ ಸಂತ್ರಸ್ತರ ನೆರವಿಗೆ ಧಾವಿಸಲು ಅಭಿಮಾನಿಗಳಿಗೆ ನಟ ಸುದೀಪ್ ಮನವಿ
ಬೆಂಗಳೂರು, ಆ. 8: ‘ಉತ್ತರ ಕರ್ನಾಟಕ ಮತ್ತು ಕರಾವಳಿಯಲ್ಲಿನ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೂಡಲೇ ಸಂತ್ರಸ್ತರ ನೆರವಿಗೆ ಅಭಿಮಾನಿಗಳ ಧಾವಿಸಬೇಕು ಎಂದು ನಟ ಕಿಚ್ಚ ಸುದೀಪ್ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿದ್ದಾರೆ.
ವಿಡಿಯೋವನ್ನು ತಮ್ಮ ಟ್ವಿಟ್ಟರ್ ಮೂಲಕ ಹಂಚಿಕೊಂಡಿರುವ ಸುದೀಪ್, ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದ ಫೋಟೊ ಮತ್ತು ವಿಡಿಯೋಗಳನ್ನು ಮಾತ್ರ ನೋಡುತ್ತಿದ್ದೇವೆ. ಅಲ್ಲಿ ಏನಾಗಿದೆ ಎಂದು ಗೊತ್ತಾಗುತ್ತಿಲ್ಲ. ನಮ್ಮ ಜನರು ಎಲ್ಲಿದ್ದಾರೆ? ಹೇಗಿದ್ದಾರೆ? ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಸರಕಾರ ತನ್ನದೇ ಆದ ಕೆಲಸ ಮಾಡುತ್ತಿದೆ. ಆದರೂ ನಾವು ಏನಾದರೂ ಸಹಾಯ ಮಾಡಬೇಕಿದೆ. ಹೀಗಾಗಿ ನನ್ನ ಸ್ನೇಹ ಬಳಗಕ್ಕೆ ಒಂದು ವಿನಂತಿ ಮಾಡಿಕೊಳ್ಳುತ್ತೇನೆ. ನೀವು ತಪ್ಪು ತಿಳಿದುಕೊಳ್ಳಬೇಡಿ, ಬೇಗ ತಲುಪಬಹುದಾದಂತಹ ಪಕ್ಕದಲ್ಲಿರುವ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ, ಅಲ್ಲಿ ಏನು ಬೇಕು? ಯಾವ ಸಹಕಾರ ಬೇಕು? ತಕ್ಷಣ ಏನು ಮಾಡಬಹುದು ಎಂಬುದನ್ನು ತಿಳಿದು ನನಗೂ ಮಾಹಿತಿ ನೀಡಿ ಒಟ್ಟಿಗೆ ಸೇರಿ ನೆರವು ನೀಡೋಣ ಎಂದು ಮನವಿ ಮಾಡಿದ್ದಾರೆ.