ಸಂತ್ರಸ್ಥರ ನೆರವಿಗೆ ಯೋಧರು, ಎನ್ಡಿಆರೆಫ್, ಹೆಲಿಕಾಪ್ಟರ್ ಕೋರಿ ಸರಕಾರಕ್ಕೆ ಪತ್ರ: ಎಡಿಸಿ ಕುಮಾರ್
ಚಿಕ್ಕಮಗಳೂರು, ಆ.10: ಮೂಡಿಗೆರೆ ತಾಲೂಕಿನ 7 ಗ್ರಾಮದ ಸುಮಾರು 120ಕ್ಕೂ ಹೆಚ್ಚು ಜನರು ಹೇಮಾವತಿ ಪ್ರವಾಹದ ನಡುಗಡೆಯಲ್ಲಿ ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ಕರೆತರಲು ಎನ್ಡಿಆರ್ ಎಫ್ ತಂಡ, ಯೋಧರ ತಂಡ, ಹೆಲಿಕ್ಯಾಪ್ಟರ್ ಕಳಿಸುವಂತೆ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸಿ ಪತ್ರ ಬರೆಯಲಾಗಿದೆ. ಈ ಪೈಕಿ ಸರಕಾರ ಯೋಧರ ತಂಡವನ್ನು ರಕ್ಷಣೆಗೆ ಕಳಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಮಾನತಿ ನದಿ ಪ್ರವಾಹಕ್ಕೆ ಬಾಳೂರು ಹೋಬಳಿಯ ಚನ್ನಡ್ಲ, ದುರ್ಗದಹಳ್ಳಿ, ಬಲಿಗೆ, ಸುಂಕಸಾಲೆ ಹಾಗೂ ಕಳಸ ಹೋಬಳಿಯ ಇಡಕಣಿಹತ್ತಿರ, ಹಿರೇಬೈಲು, ಮಲ್ಲೇಶನಗುಡ್ಡ ಹಾಗೂ ಮಲೆಮನೆ ಗ್ರಾಮದ ಸುಮಾರು 120 ಕ್ಕೂ ಹೆಚ್ಚು ಜನರು ಪ್ರವಾಹದ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದಾರೆ. ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳು ಕಡಿತಗೊಂಡಿರುವುದರಿಂದ ಜಿಲ್ಲಾಡಳಿತ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂಧಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಪ್ರವಾಹದ ನಡುಗಡ್ಡೆಯಲ್ಲಿ ಸಿಲುಕಿದವರನ್ನು ಸುರಕ್ಷಿತವಾಗಿ ಕರೆತರಲು ಎನ್ಡಿಆರ್ಎಫ್ ತಂಡ, ಯೋಧರ ತಂಡ, ಹೆಲಿಕ್ಯಾಪ್ಟರ್ ಕಳಸುವಂತೆ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸಿ ಪತ್ರ ವ್ಯವಹಾರವನ್ನು ಮಾಡಲಾಗಿದೆ. ಮಲೆನಾಡು ಭಾಗದಲ್ಲಿ ಪ್ರತಿಕೂಲ ವಾತವರಣವಿದ್ದು, ಯೋಧರ ತಂಡ ಮತ್ತು ಹೆಲಿಕ್ಯಾಪ್ಟರ್ ಯಾವ ರೀತಿ ಕಾರ್ಯಚರಣೆ ನಡೆಸುತ್ತಾರೆ ಎಂಬದನ್ನು ಅವರೇ ನಿರ್ಧಾರಿಸಲಿದ್ದಾರೆ ಎಂದರು.
ಮಳೆಯಿಂದ ಮಲೆನಾಡು ಭಾಗದಲ್ಲಿ ಧರೆಕುಸಿತ, ಮರಗಳು ಹಾಗೂ ವಿಧ್ಯುತ್ ಕಂಬಗಳು ಬಿದ್ದಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ವಿವಿಧ ಇಲಾಖೆಯ ಸಿಬ್ಬಂಧಿಗಳು ಸ್ಥಳದಲ್ಲೇ ಮೊಕಂ ಹೂಡಿ ತೆರವು ಕಾರ್ಯಚರಣೆ ಭರದಿಂದ ಸಾಗಿದೆ ಎಂದರು.
ತುಂಗಾ, ಭದ್ರಾ, ಹೇಮಾವತಿ ನದಿಯ ಹರಿವು ಹೆಚ್ಚಾಗಿದ್ದು, ಭದ್ರಾನದಿಯ ಒಳಹರಿವು 79158 ಕ್ಯೂಸೆಕ್ಸ್ ನಷ್ಟಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿಘಾಟಿ ರಸ್ತೆ, ಹಳವಳ್ಳಿ, ಹೊರನಾಡು ರಸ್ತೆ, ಕಳಸ ರಸ್ತೆ, ತತ್ಕೊಳ-ಕುಂದೂರು ರಸ್ತೆ, ದುರ್ಗದಹಳ್ಳ, ಚನ್ನಹಡ್ಲು ಹಿರೇಬೈಲು ಮಲ್ಲೇಶನಗುಡ್ಡ ರಸ್ತೆಗಳಲ್ಲಿ ಭೂ ಕುಸಿತವಾಗಿ ಸಂಪರ್ಕ ಕಡಿದುಕೊಂಡಿದ್ದು ಜನರ ರಕ್ಷಣೆಗೆ ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದರು.
ಜನರ ರಕ್ಷಣ ಕಾರ್ಯಕ್ಕೆ ದೋಣಿಗಳು, ಲೈಫ್ಜಾಕೆಟ್, ಪ್ರಥಮ ಚಿಕಿತ್ಸೆ ಕಿಟ್ ಇತ್ಯಾದಿ ಸಲಕರಣೆಗಳನ್ನು ನೀಡಲಾಗಿದೆ. ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಾಹಯವಾಣಿ ತೆರೆಯಲಾಗಿದ್ದು 24 ಗಂಟೆ ಕಾರ್ಯನಿರ್ವಹಿಸುತ್ತಿವೆ. ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಅಲ್ಲಲ್ಲಿ ಧರೆ ಕುಸಿಯುತ್ತಿದ್ದು ಆಗಸ್ಟ್ 14ರ ವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದರು.
ಪ್ರವಾಸಿಗರ ಹಿತ ದೃಷ್ಟಿಯಿಂದ ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿ, ಮಾಣಿಕ್ಯಧಾರ ಸ್ಥಳಗಳಿಗೆ ಪ್ರವಾಸಿಗರು ಬಾರದಂತೆ ಮುಂಜಾಗ್ರತವಾಗಿ ಸೂಚನೆ ನೀಡಲಾಗಿದೆ. ಈ ಪ್ರದೇಶಕ್ಕೆ ಹೋಗದಂತೆ ಕೈಮರದಲ್ಲಿ ತಡೆಯಲು ಪೊಲೀಸರನ್ನು ನಿಯೋಜಿಸುವುದಾಗಿ ತಿಳಿಸಿದರು.
ಪ್ರವಾಹ ಪೀಡಿತರಿಗೆ ನಿರಾಶ್ರಿತ ಕೇಂದ್ರಗಳನ್ನು ತೆರೆಯಲಾಗಿದ್ದು, ಕೊಟ್ಟಿಗೆಹಾರ ಮುರಾರ್ಜಿ ಶಾಲೆಯಲ್ಲಿ 150 ಜನ, ಕಳಸ ಹಿರೇಬೈಲ್ನ ಗಣಪತಿ ಸಮುದಾಯ ಭವನ 40 ಜನ, ಹಿರೇಬೈಲ್ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 50 ಜನ ಗೋಣಿಬೀಡು ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ 35 ಜನ, ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಚರ್ಚ್ ಹಾಲ್ನಲ್ಲಿ 50 ಜನ ಹಾಗೂ ಬಾಳೆಹಿನ್ನೂರು ಸರಕಾರಿ ಪ್ರೌಢಶಾಲೆಯಲ್ಲಿ 40 ಅಸರೆ ಪಡೆದುಕೊಂಡಿದ್ದಾರೆ ಎಂದರು.
ಮೂಡಿಗೆರೆ ತಾಲೂಕು ಮತಿಕಟ್ಟೆ ಗ್ರಾಮದಲ್ಲಿ ಗುಡ್ಡ ಕುಸಿದು ಸಂತೋಷ್ ಗಡ್ಡದ ಮಣ್ಣಿನಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು ಶೋಧಕಾರ್ಯ ನಡೆಯುತ್ತಿದೆ. ಮೂಡಿಗೆರೆ ತಾಲೂಕು ಹಾಲೂರು ಗ್ರಾಮದ ಶ್ರೀವತ್ಸ ಹೇಮಾವತಿ ನದಿಗೆ ಕಾಲುಜಾರಿ ಬಿದ್ದು ನದಿನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಶೋಧಕಾರ್ಯ ನಡೆಯುತ್ತಿದೆ. ಶ್ರಿವತ್ಸ ಶೋಧಕಾರ್ಯ ನಡೆಸುವ ಸಂದರ್ಭದಲ್ಲಿ ಅಪರಿಚಿತ ಶವವೊಂದು ಕೆಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದುವರೆಗೂ ಆತ ಯಾರು ಎಂಬ ಗುರುತು ಸಿಕ್ಕಿಲ್ಲ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಕುಮಾರ್ ತಿಳಿಸಿದರು.
ನೋಡಲ್ ಅಧಿಕಾರಿಗಳ ನೇಮಕ: ಪ್ರವಾಹ ಪರಿಸ್ಥಿತಿ ಸಂಬಂಧ ಸಾರ್ವಜನಿಕರಿಗೆ ನೆರವಾಗಲು ಪ್ರತೀ ತಾಲೂಕು ವ್ಯಾಪ್ತಿಗೆ ಓರ್ವ ಅಧಿಕಾರಿಯನ್ನು ಜಿಲ್ಲಾಡಳಿತ ನೇಮಿಸಿದೆ. ಈ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಸಾರ್ವಜನಿಕರು ದೂರು ಹೇಳದಲ್ಲಿ ಪರಿಹಾರಕ್ಕೆ ಅಧಿಕಾರಿಗಳು ಸಿಬ್ಬಂದಿ ತಂಡ ಮುಂದಾಗಲಿದೆ.
ತಾಲೂಕುವಾರು ನೊಡಲ್ ಅಧಿಕಾರಿಗಳು ಚಿಕ್ಕಮಗಳೂರು - ರಾಜಗೋಪಾಲ್- 9480860001, ಮೂಡಿಗೆರೆ- ಮಲ್ಲಿಕಾರ್ಜುನ್- 9480843028, ಶೃಂಗೇರಿ- ಸೋಮಸುಂದರ್ -8277930890, ಕೊಪ್ಪ- ನಿಂಗರಾಜು-8197370342, ನರಸಿಂಹರಾಜಪುರ- ಸಂಜಯ್-9448999222, ಕಡೂರು-ವಿಠಲ್-9480860002, ತರೀಕೆರೆ- ಕೃಷ್ಣಪ್ಪ-9448964337 ಸಂತ್ರಸ್ಥರು ಈ ಅಧಿಕಾರಿಗಳು ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಎಡಿಸಿ ಕುಮಾರ್ ಕೋರಿದ್ದಾರೆ.