ತಾಯಿ ಸೇರಿ ಇಬ್ಬರು ಮಕ್ಕಳು ಆತ್ಮಹತ್ಯೆ
ಬೆಂಗಳೂರು, ಆ.12: ಕೌಟುಂಬಿಕ ಕಲಹದಿಂದ ನೊಂದ ತಾಯಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೀನಗರದ ಕಾಳಪ್ಪ ಬಡಾವಣೆ, ಕೇಂಬ್ರಿಡ್ಜ್ ಶಾಲೆ ಸಮೀಪದ ನಿವಾಸಿಯಾದ ರಾಜೇಶ್ವರಿ (40) ಹಾಗೂ ಇವರ ಪುತ್ರಿ ಮಾನಸ (17), ಭೂಮಿಕ (15) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳು ಎಂದು ತಿಳಿದುಬಂದಿದೆ.
ಮೂಲತಃ ಮಂಡ್ಯದವರಾದ ರಾಜೇಶ್ವರಿ ಗೃಹಿಣಿಯಾಗಿದ್ದು, ಇವರ ಪತಿ ಸಿದ್ದಯ್ಯ ಕೆಇಬಿಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದಾರೆ.ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಪದೇ ಪದೇ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಪತಿ ಸಿದ್ದಯ್ಯ, ಪತ್ನಿಯೊಂದಿಗೆ ಜಗಳವಾಡಿಕೊಂಡು ಊರಿಗೆ ತೆರಳಿದ್ದ.ಬಳಿಕ, ರವಿವಾರ ರಾತ್ರಿ ಪತ್ನಿಗೆ ಮೊಬೈಲ್ ಕರೆ ಮಾಡಿದ್ದರೂ ಯಾರು ಸ್ಪಂದಿಸಿಲ್ಲ. ತದನಂತರ, ಸಂಬಂಧಿಕರು ಮನೆ ಬಳಿ ಹೋಗಿ ನೋಡಿದಾಗ ಬಾಗಿಲು ಹಾಕಿರುವುದನ್ನು ಗಮನಿಸಿ ಕಿಟಕಿ ಮೂಲಕ ನೋಡಿದಾಗ ಈ ಮೂವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಘಟನೆ ಸಂಬಂಧ ಹನುಮಂತನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.