ಕೊಡಗು: ಅಗ್ನಿಶಾಮಕ ದಳದಿಂದ 800ಕ್ಕೂ ಅಧಿಕ ಮಂದಿಯ ರಕ್ಷಣೆ
ಮಡಿಕೇರಿ, ಆ.14: ಕಳೆದ ವಾರ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯ ನಾಗರಿಕರು ಸಂಕಷ್ಟ ಎದುರಿಸುವಂತಾಗಿದ್ದು, ಆ ಸಂದರ್ಭದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಜನ ಜಾನುವಾರು ರಕ್ಷಣೆ, ಆಸ್ತಿ ಪಾಸ್ತಿ ರಕ್ಷಣೆ ಮಾಡುವಲ್ಲಿ ಶ್ರಮಿಸಿದೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ಸುಮಾರು 800ಕ್ಕೂ ಹೆಚ್ಚು ಜನರು ಹಾಗೂ 20 ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಅಧಿಕಾರಿ ಪಿ.ಚಂದನ್ ಅವರು ಮಾಹಿತಿ ನೀಡಿದ್ದಾರೆ.
ಕದನೂರು ಗ್ರಾಮದ ಬಳಿ 240ಕ್ಕೂ ಹೆಚ್ಚು ಜನರ ರಕ್ಷಣೆ, ತೋರ ಗ್ರಾಮದಲ್ಲಿ 60 ಮಂದಿಯನ್ನು ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ, ಕುಶಾಲನಗರದ ಕುವೆಂಪು ಮತ್ತು ಸಾಯಿ ಬಡಾವಣೆಯಲ್ಲಿ 100 ಕ್ಕೂ ಹೆಚ್ಚು ಜನರ ಸ್ಥಳಾಂತರ, ಗಂಧದ ಕೋಟೆ ಮತ್ತು ಗುಡ್ಡೆಹೊಸೂರು ಬಳಿ ಕೆಟ್ಟು ನಿಂತ ಬಸ್ಗಳನ್ನು ಪೊಲೀಸರ ಜೊತೆ ಸೇರಿ ರಕ್ಷಣೆ, ಕಾಲೂರು, ಗಾಳಿಬೀಡು, ಅಬ್ಬಿಪಾಲ್ಸ್ ರಸ್ತೆ, ರಾಜಾಸೀಟು, ಕೋಟೆ ಆವರಣ, ವೀರಾಜಪೇಟೆ-ಹಾಕತ್ತೂರು ರಸ್ತೆ ಮತ್ತಿತರ ಕಡೆಗಳಲ್ಲಿ ಮರಗಳನ್ನು ತೆರವುಗೊಳಿಸಿರುವುದು, ಭಾಗಮಂಡಲದಲ್ಲಿ ಸುಮಾರು 300ಕ್ಕೂ ಹೆಚ್ಚು ಜನರ ಸ್ಥಳಾಂತರ, ಹೊದವಾಡ ಮತ್ತು ಬಲಮುರಿಯಲ್ಲಿ ಸಂತ್ರಸ್ತರ ರಕ್ಷಣೆ ಹೀಗೆ ಹಲವು ಕಾರ್ಯ ರಕ್ಷಣಾ ಚಟುವಟಿಕೆಗಳನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ಕೈಗೊಳ್ಳಲಾಗಿದೆ ಎಂದು ಚಂದನ್ ಅವರು ವಿವರಿಸಿದ್ದಾರೆ.