ಹನೂರು: ಮಹದೇಶ್ವರ ಬೆಟ್ಟಕ್ಕೆ ಎಸ್.ಎಂ.ಕೃಷ್ಣ ಕುಟುಂಬ ಸಮೇತ ಭೇಟಿ
ಹನೂರು, ಆ.19: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಅವರ ಕುಟುಂಬ ವರ್ಗ ಇಂದು ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಮಾದಪ್ಪನ ದರ್ಶನ ಪಡೆದರು
ಎಸ್.ಎಂ ಕೃಷ್ಣ ತಮ್ಮ ಕುಟುಂಬದ ಜೊತೆಗೂಡಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಮಾದಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ದೇವಸ್ಥಾನದ ಪ್ರಧಾನ ಅರ್ಚಕರ ಬಳಿ ನನ್ನ ಮನೆ ದೇವರಾದ ಮಹದೇಶ್ವರ ಸ್ವಾಮಿ ದರ್ಶನ ಪಡೆಯಲು ನಾಲ್ಕು ವರ್ಷಗಳ ನಂತರ ಆಗಮಿಸಿದ್ದೇನೆ ಎಂದು ಹೇಳಿ ಕೆಲ ಕಾಲ ದೇವರ ವಿಗ್ರಹವನ್ನು ನೋಡಿ ಭಾವುಕರಾದರು.
ಬಳಿಕ ಬೆಟ್ಟದ ರಾಷ್ಟ್ರಪತಿ ಭವನದಲ್ಲಿ ವಿಶ್ರಾಂತಿ ಪಡೆದು ಪ್ರಸಾದ ಸ್ವೀಕರಿಸಿದರು.
ಈ ವೇಳೆ ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯ ಪಿಎಸ್ಸೈ ಮಹೇಶ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.