ಹಾಸನ: ಸಂಸದ ತೇಜಸ್ವಿ ಸೂರ್ಯ ಕ್ಷಮೆಯಾಚನೆಗೆ ಒತ್ತಾಯಿಸಿ ಧರಣಿ
ಹಾಸನ, ಆ.20: ಕನ್ನಡಿಗರನ್ನು ಗೂಂಡಾ ಹಾಗೂ ರೌಡಿಗಳೆಂದು ಕರೆದಿರುವ ಸಂಸದ ತೇಜಸ್ವಿ ಸೂರ್ಯರವರು ಕೂಡಲೇ ಕ್ಷಮೆ ಕೇಳಬೇಕು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆಯಿಂದ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರಿಗೆ ಮನವಿ ಸಲ್ಲಿಸಲಾಯಿತು.
ಹಿಂದೆ ಕನ್ನಡಿಗರ ಮೇಲೆ ಮರಾಠಿಗಳು ದಬ್ಬಳಿಕೆಯನ್ನು ಮಾಡಿದಂತೆ, ಇಂದು ಮಾರ್ವಾಡಿಗಳು ನಮ್ಮ ಮೇಲೆ ದರ್ಪ ಪ್ರದರ್ಶಿಸಲು ಮುಂದಾಗಿದ್ದಾರೆ. ಕೆಲ ದಿನಗಳ ಹಿಂದೆ ಮಾರ್ವಾಡಿಗಳು ಕಾರ್ಯಕ್ರಮ ಮಾಡುವಾಗ ಹಿಂದಿ ನಾಮಫಲಕ ಹಾಕಲಾಗಿದ್ದು, ಕೂಡಲೇ ಹಿಂದಿ ಫಲಕ ತೆಗೆದು ಕನ್ನಡ ಭಾಷೆಯ ನಾಮಫಲಕ ಹಾಕುವಂತೆ ವಿನಯದಿಂದ ಮನವಿ ಮಾಡಲಾಗಿತ್ತು. ಈ ವೇಳೆ ಸಂಸದ ತೇಜಸ್ವಿ ಸೂರ್ಯ ನಮ್ಮ ಕನ್ನಡಿಗರನ್ನು ಗೂಂಡ, ರೌಡಿಗಳು ಎಂದು ಕರೆದಿದ್ದಾರೆ. ಜನಸೇವೆ ಮಾಡಲು ಬಂದಿರುವ ಸಂಸದರು ಜಾತಿಯತೆಯನ್ನು ಕದಡುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕನ್ನಡಿಗರನ್ನು ಗೂಂಡಾ, ರೌಡಿ ಎನ್ನುವ ಮಾತನ್ನು ಕೂಡಲೇ ಸಂಸದ ತೇಜಸ್ವಿ ಸೂರ್ಯರವರು ಹಿಂತೆಗೆದು, ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಒಬ್ಬ ಸಂಸದರಾಗಿ ಕನ್ನಡಿಗರ ಮೇಲೆ ಕೇವಲವಾಗಿ ಮಾತನಾಡಬಾರದು. ಜಾತಿ ರಾಜಕಾರಣ ಮಾಡಿ ಮಾರ್ವಾಡಿಗಳನ್ನು ಓಲೈಸುವ ಕೆಲಸ ಮಾಡುವ ಮೂಲಕ ಕನ್ನಡಿಗರಿಗೆ ದ್ರೋಹ ಬಗೆದಿದ್ದಾರೆ ಎಂದು ಕಿಡಿಕಾರಿದರು. ಕನ್ನಡಿಗರನ್ನು ಅವಮಾನ ಮಾಡಿರುವ ಮಾರ್ವಾಡಿಗಳನ್ನು ತಕ್ಷಣ ಬಂಧಿಸಬೇಕು. ಇಲ್ಲವಾದರೆ ಎಲ್ಲಾ ಕನ್ನಡ ಪರ ಸಂಘಟನೆಗಳು ಸೇರಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ ಜಿಲ್ಲಾಧ್ಯಕ್ಷ ಹರೀಶ್ಗೌಡ, ತೌಫಿಕ್ ಅಹಮದ್ ಇತರರು ಇದ್ದರು.