ಗ್ರಾಮಸಭೆ ನಿರ್ಧಾರದ ಮೇರೆಗೆ ಗ್ರಾಮಗಳ ಶಾಶ್ವತ ಸ್ಥಳಾಂತರ: ಸಚಿವ ಲಕ್ಷ್ಮಣ ಸವದಿ
ಬೆಳಗಾವಿ, ಆ.22: ರಾಜ್ಯದ ಹದಿನೇಳು ಜಿಲ್ಲೆಗಳಲ್ಲಿ ಪ್ರವಾಹದಿಂದ ಆಗಿರುವ ಹಾನಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎಲ್ಲ ಸಚಿವರು ವರದಿ ನೀಡಲಿದ್ದು, ಇದನ್ನು ಆಧರಿಸಿ ಸರಕಾರ ಇನ್ನೊಂದೆರಡು ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಗೋಕಾಕ ಪಟ್ಟಣದಲ್ಲಿ ಪ್ರವಾಹ ಹಾಗೂ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದ ಬಳಿಕ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದರು.
ನಾಳೆ ಅಥವಾ ನಾಡಿದ್ದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಾವು ಎಲ್ಲ ಸಚಿವರು ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದಂತೆ ವರದಿ ನೀಡಲಿದ್ದೇವೆ. ಸಮಗ್ರ ವರದಿ ಆಧರಿಸಿ ಸರಕಾರ ಇನ್ನೆರಡು ದಿನಗಳಲ್ಲಿ ಸಂತ್ರಸ್ತರ ಪುನರ್ವಸತಿಗಾಗಿ ಮಹತ್ವದ ನಿರ್ಣಯ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ಸಂತ್ರಸ್ತರ ಬದುಕು ಕಟ್ಟಿಕೊಡಲು ಸರಕಾರ ಬದ್ಧವಾಗಿದೆ. ಮಣ್ಣಿನಿಂದ ಕಟ್ಟಿದ ಬಹುತೇಕ ಮನೆಗಳು ನಾಶವಾಗಿವೆ. ಸದ್ಯಕ್ಕೆ ಸರಕಾರ ತುರ್ತಾಗಿ ಹತ್ತು ಸಾವಿರ ರೂ.ಪರಿಹಾರ ಹಾಗೂ ಮನೆ ಕಳೆದುಕೊಂಡ ಜನರಿಗೆ ಪರಿಹಾರ ನಿಗದಿಗೊಳಿಸಲಾಗಿತ್ತು. ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಆಗಿರುವ ಹಾನಿಯನ್ನು ಗಮನಿಸಲಾಗಿದ್ದು, ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಲಕ್ಷ್ಮಣ ಸವದಿ ತಿಳಿಸಿದರು.
ಬೆಳೆಹಾನಿ ಸಮೀಕ್ಷೆ ನಡೆಸುವುದು ಸ್ವಲ್ಪಮಟ್ಟಿಗೆ ತಡವಾಗಲಿದೆ. ಬೆಳೆಹಾನಿ ಸೇರಿದಂತೆ ಎಲ್ಲ ಬಗೆಯ ಪರಿಹಾರದ ಕುರಿತು ಹಾಗೂ ಶಾಶ್ವತ ಸ್ಥಳಾಂತರ ಕುರಿತು ಸಚಿವ ಸಂಪುಟ ಸಭೆಯಲ್ಲಿ ವಿಸ್ತತವಾಗಿ ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಶಾಶ್ವತ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮುಳುಗಡೆಯಾಗುವ ಗ್ರಾಮಗಳ ಜನರ ಜತೆ ಚರ್ಚಿಸಿ, ಗ್ರಾಮಸಭೆಯ ನಿರ್ಧಾರದ ಮೇರೆಗೆ ಸರಕಾರ ಕ್ರಮ ಕೈಗೊಳ್ಳಲಿದೆ. ಸ್ಥಳಾಂತರಕ್ಕೆ ಜನರ ಅಭಿಪ್ರಾಯ, ಲಭ್ಯವಿರುವ ಜಮೀನು, ಖರ್ಚು ವೆಚ್ಚಗಳ ಬಗ್ಗೆ ಸೂಕ್ತ ವರದಿ ತಯಾರಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅವರು ತಿಳಿಸಿದರು.
ಗೋಕಾಕ ಪಟ್ಟಣದ ವ್ಯಾಪ್ತಿಯಲ್ಲಿ ಕುಸಿದಿರುವ ಮನೆಗಳ ಸಮೀಕ್ಷೆಯನ್ನು ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕತೆಯಿಂದ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಲಕ್ಷ್ಮಣ ಸವದಿ ಸೂಚನೆ ನೀಡಿದರು.
ಶಾಶ್ವತ ಸ್ಥಳಾಂತರಕ್ಕೆ ಒತ್ತಾಯ: ಆಗಾಗ ಪ್ರವಾಹದಿಂದ ಬಾಧಿತಗೊಳ್ಳುವ ಗ್ರಾಮಗಳು ಮತ್ತು ಗೋಕಾಕ ಪಟ್ಟಣದ ಕೆಲವು ಪ್ರದೇಶಗಳನ್ನು ಶಾಶ್ವತವಾಗಿ ಸ್ಥಳಾಂತರಿಸಬೇಕು ಎಂದು ಸ್ಥಳೀಯ ಮುಖಂಡರು ಸಚಿವರನ್ನು ಒತ್ತಾಯಿಸಿದರು.
ಲೋಳಸೂರ ಸೇತುವೆಯಿಂದ ರಸ್ತೆ ಎತ್ತರ ಹೆಚ್ಚಿಸಿದ್ದರಿಂದ ನೀರು ಪಟ್ಟಣಕ್ಕೆ ನುಗ್ಗುತ್ತಿದೆ. ಆದ್ದರಿಂದ ಸೇತುವೆಯ ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕೆಂದು ಸಲಹೆ ನೀಡಿದರು.
ಸಂಪೂರ್ಣ ಮನೆ ಕಳೆದುಕೊಂಡಿರುವವರಿಗೆ 10 ಸಾವಿರ ರೂ.ಬದಲು 25 ಸಾವಿರ ರೂ.ಪರಿಹಾರ ನೀಡಬೇಕು. ಸಣ್ಣಪುಟ್ಟ ವ್ಯಾಪಾರಸ್ಥರಿಗೂ ನಷ್ಟ ಭರಿಸಲು ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡರು. ನದಿಪಾತ್ರದಲ್ಲಿ ಅತಿಕ್ರಮಣ ತೆರವುಗೊಳಿಸಬೇಕು ಎಂದು ಸಚಿವರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.