ಚಿದಂಬರಂ ಬಂಧನದ ಹಿಂದೆ ಬಿಜೆಪಿ ಸೇಡಿನ ರಾಜಕಾರಣ ಇಲ್ಲ: ಮೈಸೂರಿನಲ್ಲಿ ನಿರ್ಮಲಾ ಸೀತಾರಾಮನ್
ಮೈಸೂರಿ,ಆ.22: ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಬಂಧನದ ಹಿಂದೆ ಬಿಜೆಪಿ ಪಕ್ಷದ ಸೇಡಿನ ರಾಜಕಾರಣ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.
ನಗರದ ಸಿದ್ಧಾರ್ಥ ನಗರದಲ್ಲಿರುವ ಜಿ.ಎಸ್.ಟಿ.ಕಸ್ಟಮ್ಸ್ ಬಿಲ್ಡಿಂಗ್ನಲ್ಲಿ ಗುರುವಾರ ಹಣಕಾಸು ಇಲಾಖೆ ಅಧಿಕಾರಿಗಳ ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿ ಕೈವಾಡದಿಂದ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ಬಂಧಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿರುವ ಬಗ್ಗೆ ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ ಆರೋಪ ಹುರುಳಿಲ್ಲದ್ದು ಎಂದರು. ಹತ್ತಾರು ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಬಹುಶಃ ತಮ್ಮ ಆಡಳಿತದ ಅವಧಿಯಲ್ಲಿ ಈ ರೀತಿಯ ಆಡಳಿತ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿರಬೇಕು. ಇದು ಬಿಜೆಪಿಯ ಸೇಡಿನ ರಾಜಕಾರಣ ಅಲ್ಲ ಎಂದು ಹೇಳಿದರು.
ನ್ಯಾಯಾಂಗದ ಮೇಲೆ ನಂಬಿಕೆ ಇರಬೇಕು, ಒಂದು ರಾಷ್ಟ್ರೀಯ ಪಕ್ಷವಾಗಿ ಈ ರೀತಿಯ ಅಪವಾದ ಮಾಡುವುದು ಸರಿಯಲ್ಲ. ಸಿಬಿಐ, ಈ.ಡಿ. ಮಾಹಿತಿ ಕೇಳುವುದು ಅವರ ಅಧಿಕಾರ. ಆದರೆ ಈ ವಿಚಾರದಲ್ಲಿ ಒಂದು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಸರಿಯಾಗಿ ನಡೆದುಕೊಂಡಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಅವಲೋಕನ ಮಾಡಿಕೊಳ್ಳಬೇಕು ಎಂದು ನಿರ್ಮಲಾ ಸೀತಾರಾಮನ್ ಗರಂ ಆದರು.
ತೆರಿಗೆ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳ ವ್ಯವಹಾರಸ್ಥರ ನಡುವೆ ಮುಖಾಮುಖಿ ಚರ್ಚೆ ಇನ್ನು ಮುಂದೆ ಇರುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. ಈ ಕುರಿತು ಮೈಸೂರಿನಲ್ಲಿ ನಡೆದ ದೇಶದ ಮೂರನೇ ಸಭೆ ಬಳಿಕ ಮಾಹಿತಿ ನೀಡಿದ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್, ಮುಂದಿನ ವಿಜಯ ದಶಮಿ ಬಳಿಕ ತಾಂತ್ರಿಕ ವೇದಿಕೆ ಮೂಲಕವೇ ತೆರಿಗೆಗೆ ಸಂಬಂಧಿಸಿದ ಎಲ್ಲಾ ಸಂವಹನಗಳು ನಡೆಯಲಿವೆ. ಗುಜರಾತ್, ವಾರಣಾಸಿ ನಂತರ ಮೈಸೂರಿನಲ್ಲಿ ರಾಷ್ಟ್ರ ಮಟ್ಟದ ಸಭೆ ನಡೆಸಲಾಗಿದೆ ಎಂದರು.