ತೇಜಸ್ವಿ ಸೂರ್ಯನ ನಾಲಿಗೆ ಸೀಳುತ್ತೇನೆ: ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ
ಧಾರವಾಡ, ಆ.23: ಕನ್ನಡ ಪರ ಹೋರಾಟಗಾರರ ಕುರಿತು ಕೀಳು ಮಟ್ಟದ ಮಾತುಗಳನ್ನಾಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯನ ನಾಲಿಗೆ ಸೀಳುತ್ತೇನೆ ಎಂದು ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ವಾಗ್ದಾಳಿ ನಡೆಸಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಕನ್ನಡ ಹೋರಾಟಗಾರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ಬಗ್ಗೆ ಅವರು ಕನ್ನಡ ಹೋರಾಟಗಾರರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಶಾಸಕ ರವಿ ಸುಬ್ರಹ್ಮಣ್ಯ ಅವರ ಸಂಬಂಧಿ ಆಗಿರುವ ತೇಜಸ್ವಿ ಸೂರ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಬಳಿ ಲಾಭಿ ನಡೆಸಿ, ಲೋಕಸಭಾ ಸದಸ್ಯರಾಗಿದ್ದಾರೆ. ಇಂತಹ ವ್ಯಕ್ತಿ, ಯಾವುದೇ ಬದ್ಧತೆ ಇಲ್ಲದೆ, ಕನ್ನಡ ಹೋರಾಟಗಾರರ ಬಳಿ ಕ್ಷಮೆ ಕೇಳದೆ ಇದ್ದರೆ, ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮೊದಲಿನಿಂದಲೂ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ನನ್ನ ಸಂಬಂಧ ಚೆನ್ನಾಗಿದೆ. ಅವರಿಂದಲೇ ನನಗೆ ಒಳ್ಳೆಯ ಹೆಸರು ಬಂದಿದೆ. ಅವರು ಬಂದ ಮೇಲೆಯೇ ಕೆಜೆಪಿಗೆ ಒಳ್ಳೆದಾಗಿದೆ ಎಂದು ಪದ್ಮನಾಭ ಪ್ರಸನ್ನ ನುಡಿದರು.