ಕೆಎಸ್ಸಾರ್ಟಿಸಿ ಚಾಲಕರು, ನಿರ್ವಾಹಕರಿಗೆ ಮೊಬೈಲ್ ಬಳಕೆ ನಿಷೇಧ: ಆದೇಶ ಹಿಂಪಡೆಯಲು ಒತ್ತಾಯ
ಚಿಕ್ಕಮಗಳೂರು, ಆ.28: ಕೆಎಸ್ಸಾರ್ಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರು ಮೊಬೈಲ್ ಬಳಸುವುದರಿಂದ ಸಂಸ್ಥೆಗೆ ನಷ್ಟ ಉಂಟಾಗುತ್ತಿದೆ ಎಂಬ ನೆಪವೊಡ್ಡಿ ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯದ ವೇಳೆ ಮೊಬೈಲ್ ಬಳಸುವುದನ್ನು ನಿಷೇದಿಸಿ ಸಂಸ್ಥೆ ಆದೇಶ ಹೊರಡಿಸಿದೆ. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್ನ ವಿಭಾಗೀಯ ಪ್ರಧಾನ ಕಾರ್ಯದರ್ಶಿ ರಂಗನಾಥ್ ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಆದಾಯ ಸೋರಿಕೆ ನೆಪವೊಡ್ಡಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ. ಸಂಸ್ಥೆಯ ಚಾಲಕರು ಹಾಗೂ ನಿರ್ವಾಹಕರಿಗೆ ಸಂಸ್ಥೆ ವತಿಯಿಂದ ಮೊಬೈಲ್ ನೀಡಿಲ್ಲ. ಈ ಸಿಬ್ಬಂದಿ ತಮ್ಮ ಸ್ವಂತ ಮೊಬೈಲ್ಗಳನ್ನು ಬಳಕೆ ಮಾಡುತ್ತಿದ್ದಾರೆ. ಅಲ್ಲದೇ ನೌಕರರು ಕರ್ತವ್ಯದ ವೇಳೆ ಅಥವಾ ಬಸ್ ಚಾಲನೆ ಮಾಡುವ ವೇಳೆ ಮೊಬೈಲ್ ಬಳಸಿದಲ್ಲಿ ಶಿಸ್ತು ಕ್ರಮಕೈಗೊಳ್ಳುವುದಕ್ಕೆ ನಮ್ಮ ತಕರಾರಿಲ್ಲ. ಆದರೆ ಯಾವುದೋ ಜಿಲ್ಲೆಯ ನೌಕರರರು ಇನ್ಯಾವುದೋ ಜಿಲ್ಲೆಯಲ್ಲಿ ತಂಗಿದ್ದ ವೇಳೆ ಅವರ ಕುಟುಂಬದವರೊಂದಿಗಾದರೂ ಮಾತನಾಡಲು, ಎಲ್ಲಿದ್ದೇವೆಂದು ತಿಳಿಸಲಾದರೂ ಮೊಬೈಲ್ ಅಗತ್ಯವಿದೆ. ಸಂಸ್ಥೆ ಇದಕ್ಕೂ ಅಡ್ಡಿ ಪಡಿಸಿದರೆ ನೌಕರರ ಮಾನಸಿಕ ಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿರುವ ಅವರು, ಈ ಸಿಬ್ಬಂದಿ ಮೊಬೈಲ್ ಬಳಕೆ ಮಾಡುತ್ತಿರುವುದರಿಂದ ಆದಾಯ ಸೋರಿಕೆಯಾಗುತ್ತಿದೆ ಎನ್ನುವ ವಾದದಲ್ಲಿ ಹುರುಳಿಲ್ಲ ಎಂದು ಅವರ ತಿಳಿಸಿದರು.
ನಿಯಮ ಮೀರಿ ಟೆಂಪೋಗಳಲ್ಲಿ ಜನರ ಸಾಗಾಟ ನಡೆಸಲಾಗುತ್ತಿದೆ. ವಿಕಲಚೇತನರ ಹೆಸರಿನಲ್ಲಿ ಸ್ವಲ್ಪ ಊನವಾಗಿದ್ದರೂ ವೈದ್ಯರ ಪ್ರಮಾಣ ಪತ್ರ ತೋರಿಸಿ ಉಚಿತ ಪಾಸನ್ನು ಪಡೆದುಕೊಳ್ಳುತ್ತಿದ್ದಾರೆ. ಸುಸ್ಥಿತಿಯಲ್ಲಿ ಇಲ್ಲದ ಬಸ್ಗಳನ್ನು ಮಾರ್ಗಗಳಿಗೆ ಬಿಡಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಸಂಸ್ಥೆಗೆ ನಷ್ಟವಾಗುತ್ತಿದೆ. ಇದನ್ನು ಸಂಸ್ಥೆ ಸರಿಪಡಿಸಲಿ ಎಂದ ಅವರು, ಚಾಲಕರು ಮತ್ತು ನಿರ್ವಹಕರು ಮೊಬೈಲ್ ಇಟ್ಟುಕೊಳ್ಳಬಾರದು ಎಂಬ ಆದೇಶವನ್ನು ಹಿಂಪಡೆಯಬೇಕು. ಸಂಸ್ಥೆಗೆ ಆದಾಯ ಸೋರಿಕೆ ಆಗುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಸ್ಥೆಯ ಅಧಿಕಾರಿಗಳು ಅಗತ್ಯ ಕ್ರಮವಹಿಸಲಿ, ಅದನ್ನು ಬಿಟ್ಟು ಸಿಬ್ಬಂದಿ ಮೊಬೈಲ್ ಬಳಸಬಾರದೆಂಬ ಆದೇಶ ಅವೈಜ್ಞಾನಿಕ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅರಸೀಕೆರೆ ಡಿಪೋ ಯೂನಿಯನ್ ಅಧ್ಯಕ್ಷ ಜಯರಾಮ್ ಉಪಸ್ಥಿತರಿದ್ದರು.