ನನ್ನನ್ನು ಕೆಣಕಿದರೆ ಸುಮ್ಮನೆ ಬಿಡುವುದಿಲ್ಲ: ಅನರ್ಹ ಶಾಸಕ ಎಂಟಿಬಿ ನಾಗರಾಜ್
"ನಾನು ಬಾಯಿಬಿಟ್ಟರೆ ಅವರ ಕತೆ ಮುಗಿಯುತ್ತದೆ"
ಬೆಂಗಳೂರು, ಆ. 30: ‘ನನ್ನನ್ನು ಕೆಣಕಿದರೆ ಹುತ್ತದಲ್ಲಿರುವ ನಾಗರಹಾವನ್ನು ಕೆಣಕಿದಂತೆ. ನಾಗರಹಾವನ್ನು ಕೆಣಕಿದರೆ ಕಚ್ಚುವುದು ನಿಶ್ಚಿತ’ ಎಂದು ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ಶುಕ್ರವಾರ ಹೊಸಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇವರು ಮತ್ತು ಮತದಾರರಿಗೆ ಮಾತ್ರ ನಾನು ಹೆದರುತ್ತೇನೆಯೆ ಹೊರತು ನಾನು ಯಾವುದೇ ವ್ಯಕ್ತಿಗಳಿಗೂ ಹೆದರುವವನಲ್ಲ. ಏನೇ ಬಂದರೂ ಎದುರಿಸುತ್ತೇನೆ ಎಂದು ಇದೇ ವೇಳೆ ಗುಡುಗಿದರು.
ಲೂಟಿಯ ದಾಖಲೆಗಳಿವೆ: ಐದರಿಂದ ಹತ್ತು ಬಾರಿ ಮಂತ್ರಿಯಾಗಿ ಲೂಟಿ ಹೊಡೆದಿರುವ ದಾಖಲೆಗಳು ನನ್ನ ಬಳಿ ಇವೆ. ಅಧಿಕಾರದಲ್ಲಿದ್ದಾಗ ಎಷ್ಟು ಮೊತ್ತದ ಆಸ್ತಿ ಸಂಪಾದನೆ ಮಾಡಿದ್ದಾರೆಂದು ಗೊತ್ತಿದೆ. ಆದರೆ, ನನ್ನ ಬಗ್ಗೆ ಏನಾದರೂ ದಾಖಲೆಗಳಿದ್ದರೆ ನೀಡಲಿ ಎಂದು ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮತ್ತು ಮಾಧ್ಯಮಗಳಿಗೆ ಭಯ ಬಿದ್ದು ಎಂಟಿಬಿ ನಾಗರಾಜ್ ರಾಜೀನಾಮೆ ನೀಡಿದ್ದಾರೆಂದು ಕೆಲವರು ಹೇಳುತ್ತಾರೆ. ಆದರೆ, ನಾನು ಹೆದರಲು ಯಾವುದೇ ಅಕ್ರಮ ಆಸ್ತಿ ಸಂಪಾದನೆ ಮಾಡಿಲ್ಲ ಎಂದು ತಿರುಗೇಟು ನೀಡಿದರು.
30 ಕೋಟಿ ರೂ.ಪಡೆದು ಬಿಜೆಪಿಗೆ ಹೋದ. ಪುತ್ರನ ಉದ್ಧಾರಕ್ಕೆ ಕಾಂಗ್ರೆಸ್ ತ್ಯಜಿಸಿದ ಎಂದು ಕೆಲವರು ಆರೋಪ ಮಾಡಿದ್ದಾರೆ. ಆದರೆ, ನಾನು ಅವರ ಬಗ್ಗೆ ಬಾಯಿಬಿಟ್ಟರೆ ಅವರ ಕತೆ ಮುಗಿಯುತ್ತದೆ. ಈ ಕಲ್ಮಶ ರಾಜಕೀಯದಿಂದ ನಾನು ಬೇಸರಗೊಂಡಿದ್ದೇನೆ ಎಂದು ಖೇದ ವ್ಯಕ್ತಪಡಿಸಿದರು.