ಅತ್ಯಾಚಾರಕ್ಕೆ ಯತ್ನ: ಆರೋಪಿ ಪರಾರಿ
ಮಡಿಕೇರಿ, ಮೇ 6: ನದಿಗೆ ಬಟ್ಟೆ ಒಗೆಯಲೆಂದು ತೆರಳಿದ್ದ ಮಹಿಳೆಯೋರ್ವರನ್ನು ಅತ್ಯಾಚಾರ ಮಾಡುವ ವಿಫಲ ಯತ್ನದ ಬಳಿಕ ಆಕೆಯನ್ನು ಹತ್ಯೆಗೈಯಲು ಅಪರಿಚಿತ ವ್ಯಕ್ತಿಯೊಬ್ಬ ಯತ್ನಿಸಿರುವ ಘಟನೆ ನಾಪೋಕ್ಲುವಿನ ಕೂರುಳಿ ಗ್ರಾಮದಲ್ಲಿ ನಡೆದಿದೆ.
ಕೂರುಳಿ ಸುಭಾಷ್ ನಗರದ ಮಹಿಳೆಯೊಬ್ಬರು ಕಾವೇರಿ ನದಿಗೆ ಬಟ್ಟೆ ಒಗೆಯಲು ತೆರಳಿದ್ದರು. ಈ ಸಂದರ್ಭ ಅಪರಿಚಿತ ವ್ಯಕ್ತಿಯೋರ್ವ ಅತ್ಯಾಚಾರ ಎಸಗಲು ಯತ್ನಿಸಿದ್ದು, ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ವೇಳೆ ಮಹಿಳೆಯನ್ನು ನದಿ ನೀರಿನಲ್ಲಿ ಮುಳುಗಿಸಿ ಹತ್ಯೆ ನಡೆಸಲು ಯತ್ನಿಸಿದ. ಆದರೆ ಈಜಲು ತಿಳಿದಿದ್ದ ಮಹಿಳೆೆ ದುಷ್ಕರ್ಮಿಯಿಂದ ತಪ್ಪಿಸಿಕೊಂಡು ಮಾನ ಹಾಗೂ ಪ್ರಾಣವನ್ನು ರಕ್ಷಿಸಿ ಕೊಂಡಿದ್ದಾಳೆ. ದುಷ್ಕೃತ್ಯವೆಸಗಲು ಮುಂದಾದ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ಎನ್ನಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮಹಿಳೆ ನೀಡಿರುವ ದೂರನ್ನು ನಾಪೋಕ್ಲು ಪೊಲೀಸರು ದಾಖಲಿಸಿಕೊಂಡು, ಆರೋಪಿಯ ಪತ್ತೆಗೆ ಕ್ರಮಕೈಗೊಂಡಿದ್ದಾರೆ. ಧರಣಿಯ ಎಚ್ಚರಿಕೆ: ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮೇ 9ರಂದು ಮೆರವಣಿಗೆ ಹಾಗೂ ಧಧರಣಿ ನಡೆಸಲಾಗುವುದೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸೇವಾ ಪ್ರತಿನಿಧಿಗಳಾದ ಎಂ.ಕೆ. ಸರಸ್ವತಿ, ಒಕ್ಕೂಟದ ಅಧ್ಯಕ್ಷೆ ವಿ.ಉಮಾಲಕ್ಷ್ಮೀ, ಗ್ರಾಪಂ ಮಾಜಿ ಅಧ್ಯಕ್ಷೆ ಮುತ್ತುರಾಣಿ ಅಚ್ಚಪ್ಪ, ಮಾಜಿ ಸದಸ್ಯೆ ಸುಶೀಲಮ್ಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.