ಮೈಸೂರಿನಲ್ಲಿ ಬಿಜೆಪಿ 80 ಕೋಟಿ ರೂ. ಕಾಮಗಾರಿಯನ್ನು ರದ್ದು ಮಾಡಿದೆ: ಸಾ.ರಾ.ಮಹೇಶ್
ಮೈಸೂರು,ಸೆ.8: ಜಿಲ್ಲೆಯಲ್ಲಿ ದಸರಾ ಮಹೋತ್ಸವ ನಡೆಯುತ್ತಿದ್ದು ಅಭಿವೃದ್ಧಿ ಕೆಲಸಗಳು ಆಗಬೇಕಿವೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯ ನಂಜನಗೂಡು, ಟಿ.ನರಸೀಪುರ ಗ್ರಾಮೀಣ ಭಾಗದಲ್ಲಿ ಬಿಡುಗಡೆಯಾಗಿದ್ದ 80 ಕೋಟಿ. ರೂ ಅಭಿವೃದ್ದಿ ಕಾಮಗಾರಿಗಳನ್ನು ರದ್ದುಪಡಿಸಿದ್ದಾರೆ. ಇದು ಬಿಜೆಪಿಯವರ ಸೇಡಿನ ರಾಜಕೀಯವಲ್ಲದೆ ಮತ್ತೇನು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.
ನಗರದ ಪತ್ರಕರ್ತರ ಭವನದಲ್ಲಿ ರವಿವಾರ ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯಿಂದ ಮಂಜೂರಾಗಿದ್ದ ಕಾಮಗಾರಿಗಳನ್ನು ಅತೀ ತುರ್ತು ಅಂತ ರದ್ದುಪಡಿಸಿದ್ದಾರೆ. ಹಣ ಬಿಡುಗಡೆ ಮಾಡಿ ಒಂಬತ್ತು ತಿಂಗಳು ಆದ ಮೇಲೆ ಹಣ ಬಿಡುಗಡೆಗೆ ರದ್ದುಪಡಿಸಿದ್ದಾರೆ. ಇದು ಬಿಜೆಪಿಯರ ಸೇಡಿನ ರಾಜಕೀಯ ಅಲ್ವಾ. ಮೈತ್ರಿ ಸರ್ಕಾರದಲ್ಲಿ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದನ್ನು ರದ್ದು ಮಾಡಿದ್ದಾರೆ. ಈ ಆದೇಶವನ್ನು ಕೂಡಲೆ ವಾಪಾಸ್ ಪಡೆಯಬೇಕು. ಇಲ್ಲವಾದರೆ ಹೋರಾಟ ಮಾಡಲಾಗುವುದು. ಸದನದ ಒಳಗೂ ಹಾಗೂ ಹೊರಗಡೆ ಸಹ ನಾವು ಹೋರಾಟ ಮಾಡುತ್ತೇವಿ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆಯುತ್ತೇವೆ ಎಂದು ಹೇಳಿದರು.
ಮೈಸೂರು ಜಿಲ್ಲೆಯ ಜೆಡಿಎಸ್, ಕಾಂಗ್ರೆಸ್ ಶಾಸಕರಿಗೆ ನೀಡಿದ್ದ ಅನುದಾನ ವಾಪಾಸ್ ಗೆ ಆದೇಶ ಮಾಡಿದ್ದಾರೆ. ಒಟ್ಟು ಎಂಬತ್ತು ಕೋಟಿಯಷ್ಟು ಕಾಮಗಾರಿಯನ್ನು ತಡೆಹಿಡಿದಿದ್ದಾರೆ. ಇದು ಸೇಡಿನ ರಾಜಕೀಯದ ಉದ್ದೇಶವಲ್ಲದೆ ಬೇರೆ ಏನಿದೆ. ಬಿಜೆಪಿ ಶಾಸಕರು ಇರುವ ಕಡೆ ಯಾವುದೇ ಕಾಮಗಾರಿ ರದ್ದು ಮಾಡಿಲ್ಲ ಎಂದರು.
ಮಾಜಿ ಸಚಿವ ಜಿ ಟಿ ದೇವೇಗೌಡ ಬಿಜೆಪಿ ನಾಯಕರ ಜತೆ ಹೆಚ್ಚು ಕಾಣಿಸಿಕೊಳ್ಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಾ.ರ.ಮಹೇಶ್,
ನಾವು ಅವರ ಜತೆ ಕುಳಿತು ಒಮ್ಮೆ ಮಾತಕತೆ ಮಾಡ್ತೇವೆ. ನಿನ್ನೆ ನಗರ ಪಾಲಿಕೆ ಜೆಡಿಎಸ್ ಸದಸ್ಯರು ಜಿಡಿ ದೇವೇಗೌಡ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ನಾವೆಲ್ಲ ಒಮ್ಮೆ ಹೋಗಿ ಮಾತಾಡಿಸುತ್ತೇವೆ. ಸ್ವಲ್ಪ ದಿನಗಳ ಕಾಲ ತಟಸ್ಥವಾಗಿ ಇರುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಟಿ.ನರಸೀಪುರ ಶಾಸಕ ಅಶ್ವಿನ್ಕುಮಾರ್, ಮೈಸೂರು ಮಹಾನಗರ ಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.