ವಿಜಯಪುರ: ನ್ಯಾಯವಾದಿ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ
ವಿಜಯಪುರ, ಸೆ.13: ತಂಡವೊಂದು ನ್ಯಾಯವಾದಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಗುರುವಾರ ರಾತ್ರಿ ಇಂಡಿ ಪಟ್ಟಣದಲ್ಲಿ ನಡೆದಿದೆ.
ನ್ಯಾಯವಾದಿ ಸಂಗಮೇಶ ಚಾಂದಕವಟೆ ಹಲ್ಲೆಗೊಳಗಾದವರು. ಆರೋಪಿಗಳಾದ ಸಾದಿಕ್ ಹಾಗೂ ಮೂಸಾ ಎಂಬವರು ಸೇರಿದಂತೆ ಒಟ್ಟು ನಾಲ್ವರ ತಂಡ ಈ ಕೃತ್ಯ ಎಸಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಸಂಗಮೇಶ ಅವರು ದುಷ್ಕರ್ಮಿಗಳ ದಾಳಿಯಿಂದ ರಕ್ಷಣೆಗಾಗಿ ಕೈ ಅಡ್ಡ ಹಿಡಿದ ಪರಿಣಾಮ ಅವರ ಕೈ ಬೆರಳುಗಳಿಗೆ ತೀವ್ರತರದ ಗಾಯಗಳಾಗಿವೆ. ಅವರನ್ನು ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಳೆಯ ವೈಷಮ್ಯದಿಂದ ಈ ಹಲ್ಲೆ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ನಡುವೆ ಹಲ್ಲೆ ಆರೋಪಿಗಳು ಪರಾರಿಯಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಇಂಡಿ ಪಟ್ಟಣ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Next Story