ಪಿಐಎಲ್ ಅರ್ಜಿದಾರನಿಗೆ ಇಂಟಲಿಜೆನ್ಸ್ನಿಂದ ಕರೆ ವಿಚಾರ: ಮೊಬೈಲ್ ಕರೆ ಬೆದರಿಕೆ ಸ್ವರೂಪದ್ದಾಗಿದೆ- ಹೈಕೋರ್ಟ್
ಬೆಂಗಳೂರು, ಸೆ.13: ರಾಜ್ಯದಲ್ಲಿ ಬರ ನಿರ್ವಹಣೆಗೆ ಕೋರಿ ಪಿಐಎಲ್ ಸಲ್ಲಿಸಿದ್ದ ಗುಬ್ಬಿಯ ಮಲ್ಲಿಕಾರ್ಜುನ ಅವರಿಗೆ ಇಂಟಲಿಜೆನ್ಸ್ನವರು ಮೊಬೈಲ್ಗೆ ಕರೆ ಮಾಡಿ ಮಾಹಿತಿ ಕೋರಿದ ಪ್ರಕರಣ ಸಂಬಂಧ ಕೇಂದ್ರ ವಲಯದ ಐಜಿಪಿ ಶರತ್ಚಂದ್ರ ಅವರು ಶುಕ್ರವಾರ ಹೈಕೋರ್ಟ್ಗೆ ತನಿಖಾ ವರದಿ ಸಲ್ಲಿಸಿದರು.
ತನಿಖಾ ವರದಿ ಪಡೆದು ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠವು, ತುಮಕೂರಿನ ಇನ್ಸ್ ಪೇಕ್ಟರ್ ಹಾಗೂ ಇಬ್ಬರು ಮುಖ್ಯ ಪೇದೆಗಳು ಕರೆ ಮಾಡಿ ಪಿಐಎಲ್ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮೊಬೈಲ್ ಕರೆ ಬೆದರಿಕೆ ಸ್ವರೂಪದ್ದಾಗಿದ್ದರೂ ಸಹ ಗಂಭೀರ. ಹೀಗಾಗಿ, ರಾಜ್ಯ ಸರಕಾರ ಸೆ.23ರೊಳಗೆ ಈ ವರ್ತನೆ ಬಗ್ಗೆ ವಿವರಣೆ ನೀಡಬೇಕೆಂದು ಸೂಚಿಸಿತು. ಹಾಗೆಯೇ, ಅರ್ಜಿದಾರರಿಗೆ ಕರೆ ಮಾಡಿದ್ದ ಇನ್ಸಪೇಕ್ಟರ್ ಮತ್ತು ಮುಖ್ಯ ಪೇದೆಗಳು ಪ್ರಮಾಣ ಪತ್ರ ಸಲ್ಲಿಸಬೇಕು. ಸರಕಾರ ಇನ್ನು ಮುಂದೆ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಕ್ರಮ ಕೈಗೊಂಡು ವರದಿ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.