ಪುಣೆಯಲ್ಲಿ ಮೊಳಗಿದ ಲಿಂಗಾಯತ ಸ್ವತಂತ್ರ ಧರ್ಮದ ಕೂಗು
ಪುಣೆ, ಸೆ.15: ಕರ್ನಾಟಕದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಶಿಪಾರಸ್ಸು ಕೇಂದ್ರಕ್ಕೆ ಕಳುಹಿಸಿರುವ ಬೆನ್ನಲ್ಲೇ ಮಹಾರಾಷ್ಟ್ರ ರಾಜ್ಯದಿಂದ ಕೂಡಾ ಕೇಂದ್ರಕ್ಕೆ ಶಿಪಾರಸ್ಸು ಮಾಡಬೇಕೆಂದು ಇಂದು ಪುಣೆಯಲ್ಲಿ ಲಕ್ಷಾಂತರ ಬಸವ ಭಕ್ತರು ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ನಡೆಸಿದರು.
ಮಹಾರಾಷ್ಟ್ರದ ಪುಣೆಯ ಬಾಜಿರಾವ್ ರಸ್ತೆಯ ಬಸವೇಶ್ವರ ಸರ್ಕಲ್ ನಲ್ಲಿ ಜರುಗಿದ ಸಮಾವೇಶದಲ್ಲಿ ಮಹಾರಾಷ್ಟ್ರದ ಲಿಂಗಾಯತ ನಾಯಕ ಅವಿನಾಶ ಭೋಷಿಕರ, ಲಿಂಗಾಯತ ಹೋರಾಟ ಇಂದು ನಿನ್ನೆಯದಲ್ಲ. ಬಸವಣ್ಣನವರ ಕಾಲದಿಂದಲೂ ಸ್ವತಂತ್ರವಾಗಿ ನಡೆದು ಬಂದಿದೆ. ಆದರೆ ಸ್ವತಂತ್ರ ಭಾರತದಲ್ಲಿ ಮಾನ್ಯತೆ ದೊರೆಯದಿರುವುದು ಶೋಚನೀಯ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಕರ್ನಾಟಕದ ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು, ಬೀದರ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ತಾಯಿ, ಅಕ್ಕ ಗಂಗಾಭಿಕಾ, ಚನ್ನಬಸವಾನಂದ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಮಾತೆ ಸತ್ಯಕ್ಕ ಸೇರಿ ಅನೇಕರು ಸಾನಿದ್ಯ ವಹಿಸಿದ್ದರು.
ಮಹಾರಾಷ್ಟ್ರ ಲಿಂಗಾಯತ ನಾಯಕ ಅವಿನಾಶ ಭೋಷಿಕರ, ಸುಧೀರ್ ಕೋರೆ, ರಾಜು ಪಿಂಪ್ರೆ, ಕಿರಣ ಬೆಲ್ಲದ, ಸಿದ್ರಾಮ ಕವಳಿಕಟ್ಟಿ ಹಾಗೂ ಕರ್ನಾಟಕದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ದನ್ನೂರ, ಶಂಕರ ಗುಡಸ, ಕೆ. ಬಸವರಾಜ, ವಿರೇಶ ಹಲಕಿ, ಬಸನಗೌಡ ಗೌಡರ ಹಾಗೂ ನೂರಾರು ಮುಖಂಡರು ಸಮಾವೇಶದ ನೇತೃತ್ವ ವಹಿಸಿದ್ದರು. ಸಮಾವೇಶ ಭಾಜಿರಾವ್ ರಸ್ತೆಯಿಂದ ಸುಮಾರು 5 ಕಿ.ಮಿಗಳ ವರೆಗೆ ಪಥಸಂಚಲನ ನಡೆದು ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು.
ರಸ್ತೆಯುದ್ದಕ್ಕೂ ಬಸವ ಧ್ವಜ ಹಿಡಿದುಕೊಂಡು ಲಿಂಗಾಯತ ಧರ್ಮಾಚಿ ಸ್ವತಂತ್ರ ಧರ್ಮಾಚಿ ಮಾನ್ಯತಾ ಮಿಳಾಲಸ್ ಪೈಜೆ ಎಂಬ ಘೋಷಣೆ ಮೊಳಗಿತು.