ಅಪರಿಚಿತ ವಾಹನ ಢಿಕ್ಕಿ: ಮಾಜಿ ಯೋಧ ಸಾವು
ಮಡಿಕೇರಿ, ಸೆ.15: ಸಂಬಂಧಿಯೊಬ್ಬರ ವಿವಾಹ ಸಮಾರಂಭ ಮುಗಿಸಿ ರಸ್ತೆ ದಾಟುತ್ತಿದ್ದ ಸಂದರ್ಭ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಮಾಜಿ ಯೋಧರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿರಾಜಪೇಟೆಯ ಬಿಟ್ಟಂಗಾಲ ಮುಖ್ಯ ರಸ್ತೆಯಲ್ಲಿ ನಡೆದಿದೆ.
ವಿರಾಜಪೇಟೆ ಕೊಳ್ತೊಡು-ಬೈಗೋಡು ಗ್ರಾಮದ ನಿವಾಸಿ ಮುರುವಂಡ ಸಿ.ಪೊನ್ನಪ್ಪ (57) ಮೃತ ವ್ಯಕ್ತಿ. ವಿವಾಹ ಸಮಾರಂಭ ಮುಗಿಸಿ ಬಿಟ್ಟಂಗಾಲ ಮುಖ್ಯ ರಸ್ತೆಯ ಕಲ್ಯಾಣ ಮಂಟಪದ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟುತ್ತಿದ್ದ ಸಂದರ್ಭ ಅಪರಿಚಿತ ವಾಹನ ಢಿಕ್ಕಿಯಾಗಿ ಪರಾರಿಯಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಪೊನ್ನಪ್ಪ ಅವರನ್ನು ಗಮನಿಸಿದ ಕೆಲವರು ಮನೆಯವರಿಗೆ ಮಾಹಿತಿ ನೀಡಿದರು. ಸ್ಥಳದಲ್ಲೇ ಅವರು ಮೃತಪಟ್ಟಿರುವ ಬಗ್ಗೆ ಖಾತ್ರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಢಿಕ್ಕಿಯಾದ ವಾಹನದ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.
Next Story