ಅನುಭವದಿಂದಲೇ ಮುಖ್ಯಮಂತ್ರಿಯಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದೆ: ಸಿದ್ದರಾಮಯ್ಯ
ಹಳ್ಳಿ ಜೀವನದ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಮಾಜಿ ಸಿಎಂ
ಮೈಸೂರು,ಸೆ.15: ಹಳ್ಳಿ ಬದುಕನ್ನು ಯಾರು ಹತ್ತಿರದಿಂದ ಅನುಭವಿಸಿರುತ್ತಾರೊ ಅವರು ಪರಿಹಾರ ಕಂಡುಹಿಡಿಯಲು ಸಾಧ್ಯ, ನಾನು ಹಳ್ಳಿ ಬದುಕನ್ನು ಏನು ನೋಡಿದ್ದೆ, ಅನುಭವಿಸಿದ್ದೆ ಅದರ ಪ್ರೇರಣೆಯಿಂದ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಯಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
ನಗರದ ಹುಣಸೂರು ರಸ್ತೆಯಲ್ಲಿರುವ ರಾಣಿ ಬಹದ್ದೂರು ಸಭಾಂಗಣದಲ್ಲಿ ರವಿವಾರ ಮಣಿ ಪ್ರಕಾಶ ಹೊರ ತಂದಿರುವ ಬಸವರಾಜು ಸಿ.ಜಟ್ಟಿಹುಂಡಿ ಅವರ “ಜಟ್ಟಿಹುಂಡಿ ಚರಿತ್ರೆಯ ಹೆಜ್ಜೆಗಳು” ಪುಸ್ತಕ ಬಿಡುಗಡೆಗೊಳಿಸಿ ನಂತರ ಮಾತನಾಡಿದರು.
ಹಳ್ಳಿ ಬದುಕು ಬಹಳ ಚೆನ್ನ. ಹಳ್ಳಿಯ ಬದುಕನ್ನು ಯಾರು ಹತ್ತಿರದಿಂದ ನೋಡಿ ಅನುಭವಿಸಿರುತ್ತಾರೊ ಅವರಿಗೆ ಹೊಸ ಆಲೋಚನೆಗಳು, ಬದುಕಿನ ಅನುಭವಗಳು ಉಂಟಾಗುತ್ತವೆ. ನಾನು ಹಳ್ಳಿಯಲ್ಲಿ ಹುಟ್ಟಿ ಅಲ್ಲಿನ ಬದುಕು ಮತ್ತು ಜೀವನವನ್ನು ಹತ್ತಿರದಿಂದ ನೋಡಿ ಅನುಭವಿಸಿದ್ದರಿಂದಲೇ ಮುಖ್ಯಮಂತ್ರಿಯಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಯಿತು ಎಂದು ಹೇಳಿದರು.
ನಾನು ಮುಖ್ಯಮಂತ್ರಿಯಾದಾಗ ಮೂರು ಪ್ರಮುಖ ಕಾರ್ಯಕ್ರಮಗಳನ್ನು ಜಾರಿಗೆ ತಂದೆ. ಒಂದು ಅನ್ನಭಾಗ್ಯ, ಶೂ ಭಾಗ್ಯ, ಮತ್ತು ವಿದ್ಯಾಸಿರಿ. ಈ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾದದ್ದು ನನಗೆ ಆದ ಅನುಭವಗಳು, ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದವನು. ನಮ್ಮ ಊರಿನಲ್ಲಿ ಮಕ್ಕಳು ಅನಾರೋಗ್ಯ ಪೀಡಿತರಾದರೆ ಆ ಮಕ್ಕಳಿಗೆ ಅನ್ನ ತಿನ್ನಿಸಲು ಯಾರು ಅನ್ನ ಮಾಡುತ್ತಾರೊ ಅವರ ಮನೆ ಬಳಿ ಕಾದು ಕುಳಿತುಕೊಳ್ಳುತ್ತಿದ್ದರು. ಈ ದೃಶ್ಯವನ್ನು ಕಣ್ಣಾರೆ ಕಂಡು ಯಾರು ಒಂದು ತುತ್ತು ಅನ್ನವಿಲ್ಲದೆ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ತಂದೆ, ನಾನು ಶಾಲೆಗೆ ಹೋಗ ಬೇಕಾದರೆ ಬರಿಗಾಲಿನಲ್ಲಿ ಹೋಗುತ್ತಿದೆ. ಪ್ರೌಢಶಾಲೆ ಸೇರಿದಾಗ ನನಗೆ ಒಂದು ಜೊತೆ ಚಪ್ಪಲಿಯನ್ನು ನನ್ನ ತಂದೆ ಹೊಲಿಸಿಕೊಟ್ಟರು. ಹಾಗಾಗಿ ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಕೊಡಲು ತೀರ್ಮಾನಮಾಡಲಾಯಿತು. ಹಾಗೆ ವಿದ್ಯಾಸಿರಿ ಯೋಜನೆ ಜಾರಿಗೆ ತಂದು ಕಾಲೇಜು ವಿದ್ಯಾರ್ಥಿಗಳಿಗೆ ತಿಂಗಳಿಗೆ 1500 ರೂ.ಗಳಂತೆ ವರ್ಷಕ್ಕೆ 15 ಸಾವಿರ ರೂ ನೀಡಲಾಯಿತು. ಈ ಎಲ್ಲಾ ಯೋಜನೆಗಳು ನನ್ನ ಅನುಭವದಿಂದಲೇ ಬಂದಿದ್ದು ಎಂದು ಹೇಳಿದರು.
ಹಳ್ಳಿಗಳ ಬದುಕು ಬಹಳ ಚೆನ್ನ. ಆದರೆ ಇತ್ತೀಚೆಗೆ ಹಳ್ಳಿಗಳೂ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಳ್ಳುತ್ತಿವೆ. ನಮ್ಮ ಊರಿನಲ್ಲಿ ಹಿಂದೆ ನಮ್ಮ ಕುಲದವರು ವೀರನ ನೃತ್ಯವನ್ನು ಪ್ರತಿಮನೆಯಲ್ಲಿ ಒಬ್ಬರು ಮಾಡಬೇಕಿತ್ತು. ನಮ್ಮ ತಂದೆ ನನ್ನನ್ನು ವೀರನ ಕುಣಿತಕ್ಕೆ ಸೇರಿಸಿದ್ದರು. ಹಾಗಾಗಿ ನಾನು ನಾಲ್ಕನೆ ತರಗತಿವರೆಗೆ ಶಾಲೆಗೆ ಹೋಗಲಿಲ್ಲ. ನಮ್ಮ ಊರಿಗೆ ರಾಜಪ್ಪ ಎಂಬ ಹೆಡ್ಮಾಸ್ಟರ್ ಬಂದರು. ಅವರು ಒಮ್ಮೆ ನಮ್ಮ ಮನೆಗೆ ಬಂದವರೆ ಇವನನ್ನು ಶಾಲೆಗೆ ಕಳುಹಿಸುವಂತೆ ನಮ್ಮ ತಂದೆಗೆ ಹೇಳಿ ಶಾಲೆಗೆ ಕರೆದುಕೊಂಡು ಹೋಗಿ ನೇರವಾಗಿ ಐದನೆ ತರಗತಿಗೆ ಸೇರ್ಪಡೆಗೊಳಿಸಿದರು. ಅವರು ಬಂದು ನನ್ನನ್ನು ಶಾಲೆಗೆ ಸೇರಿಸಿದ್ದರಿಂದಲೇ ನಾನು ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು ಎಂದು ತಮ್ಮ ಹಳ್ಳಿಜೀವನದ ಹಳೆಯ ನೆನಪುಗಳನ್ನು ಮೆಲುಕುಹಾಕಿದರು.
ಪ್ರತಿಯೊಬ್ಬರೂ ಬದುಕನ್ನು ನಾವು ಪ್ರೀತಿಸಬೇಕು. ನಾವು ಮೇಲಕ್ಕೆ ಬರಬೇಕು ಎಂದರೆ ಶ್ರಮ, ಗುರಿ, ಚಲ ಮತ್ತು ಶ್ರದ್ಧೆ ಇರಬೇಕು. ಹಾಗಾದರೆ ಮಾತ್ರ ಮೇಲಕ್ಕೆ ಬರಲು ಸಾಧ್ಯ. ಹಳ್ಳಿ ಬದುಕು ಬಹಳ ಚೆನ್ನ ಸ್ವಲ್ಪ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು. ಹಳ್ಳಿಗಳಲ್ಲಿ ವಿದ್ಯಾವಂತರಾದವರು ಮೌಢ್ಯ ಕಂದಾಚಾರಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಕುಲಪಿತ ಪ್ರೊ.ಕೆ.ಎಸ್.ರಂಗಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ಮೈಸೂರು ವಿವಿ ಕುಲಪತಿ ಪ್ರೊ.ಜೆ.ಹೇಮಂತ್ ಕುಮಾರ್, ಮೈಸೂರು ವಿವಿ ಕುಲಸಚಿವ ಪ್ರೊ.ಶಿವಪ್ಪ,ಪ್ರೊ.ನಾಗಣ್ಣ, ಕಾ.ತಾ.ಚಿಕ್ಕಣ್ಣ, ಕೃತಿಯ ಕತೃ ಬಸವರಾಜು ಸಿ. ಜಟ್ಟಿಹುಂಡಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಪ್ರೊ.ನೀಲಗಿರಿ ತರಳವಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇಂದಿನ ರಾಜಕಾರಣ ಬಹಳ ಕಷ್ಟ, ಸ್ವಾರ್ಥಕ್ಕಾಗಿ ಯಾರು ರಾಜಕಾರಣ ಮಾಡಬಾರದು. ಸಮಾಜ ಸೇವೆ ಮಾಡುವ ಮನಸ್ಸಿರುವವರು ರಾಜಕಾರಣಕ್ಕೆ ಬರಬೇಕು. ರಾಜಕಾರಣಿಗಳೇ ನಾವೆ ಜನರನ್ನು ಹಾಳು ಮಾಡಿರುವುದು. ಜನರು ಹಾಳಾಗಿಲ್ಲ, ರಾಜಕಾರಣಿಗಳೇ ಹಾಳು ಮಾಡಿರುವುದು.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.