ರಾಮ ಇಲ್ಲದಿದ್ದರೂ, ಲಕ್ಷ್ಮಣ ಬರ್ತಿದ್ದಾರೆ: ಸಚಿವ ಶ್ರೀರಾಮುಲು
ಬಳ್ಳಾರಿ, ಸೆ.16: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಳ್ಳಾರಿಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಬಳ್ಳಾರಿ ಮೇಲೆ ನನಗೆ ಪ್ರೀತಿಯಿದೆ. ರಾಮ ಎಲ್ಲಾದರೂ ಹೋಗಬಹುದು, ಲಕ್ಷ್ಮಣ ನಮ್ಮ ಜಿಲ್ಲೆಗೆ ಬರ್ತಿದ್ದಾರೆ ಅಷ್ಟೇ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿಂದು ಕಲ್ಯಾಣ ಕರ್ನಾಟಕ ಧ್ವಜಾರೋಹಣ ನೆರವೇರಿಸುವುದರ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಪಕ್ಷದ ಮತ್ತು ನಾಯಕರ ತೀರ್ಮಾನಕ್ಕೆ ನಾನು ಬದ್ಧನಾಗಿರುವೆ. ಯಾದಗಿರಿಯಲ್ಲಿ ಧ್ವಜಾರೋಹಣ ಮಾಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ನಾನು ಅಲ್ಲಿಯೇ ಮಾಡಲಿದ್ದೇನೆ ಎಂದರು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಳ್ಳಾರಿಯಲ್ಲಿ ಧ್ವಜಾರೋಹಣ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದು, ಅವರೇ ಇಲ್ಲಿ ಮಾಡುತ್ತಾರೆ. ಜಿಲ್ಲೆಯ ಬಗ್ಗೆ ಅಭಿಮಾನವಿದೆ. ಆದರೆ, ನಾನು-ಸವದಿ ರಾಮ-ಲಕ್ಷ್ಮಣರಂತಿದ್ದು, ನಾನು ಹೋದರೆ ಅವರು ಬರುತ್ತಾರೆ ಎಂದು ತಿಳಿಸಿದರು.
ಫೋಟೋಗಾಗಿ ಕಸ ಗುಡಿಸಿದ ಸಚಿವ ? ಪ್ರಧಾನಿ ಮೋದಿ ಜನ್ಮ ದಿನದ ನಿಮಿತ್ತ ಆಯೋಜಿಸಿದ್ದ ಸ್ವಚ್ಛ ಸೇವಾ ಸಪ್ತಾಹ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಕಸ ಗುಡಿಸಿದರು. ಆದರೆ ಇದು ಕೇವಲ ಫೋಟೋಗಾಗಿ ಮಾತ್ರ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ತಮ್ಮ ನಿವಾಸದಿಂದ ಆಗಮಿಸಿದ ಸಚಿವ ಶ್ರೀರಾಮುಲು, ವಿಮ್ಸ್ನ ಹಳೇ ನಿರ್ದೇಶಕರ ಕಚೇರಿಯ ಆವರಣದಲ್ಲಿನ ಕುರುಚಲು ಹುಲ್ಲಿನ ಪ್ರದೇಶದಲ್ಲಿ ಕಸವೇ ಇರದ ಕಡೆ ಕೈಗವಸು ತೊಟ್ಟುಕೊಂಡು ಪೊರಕೆ ಹಿಡಿದು ಕಸಗುಡಿಸಿದರು ಎನ್ನಲಾಗಿದ್ದು, ಇದು ಟೀಕೆಗೆ ಗುರಿಯಾಗಿದೆ.