ಜಿ.ಟಿ.ದೇವೇಗೌಡಗೆ ಬಿಜೆಪಿ ಜೊತೆ ಹೋಗಲು ಕುಮಾರಸ್ವಾಮಿ ಹೇಳಿದ್ದರು ಎಂಬುದು ಸತ್ಯ: ಸಿದ್ದರಾಮಯ್ಯ
ಮೈಸೂರು,ಸೆ.16: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದ್ದು, 45 ದಿನಗಳಾದರೂ ಪರಿಹಾರ ಕೊಟ್ಟಿಲ್ಲ. ಕೇಂದ್ರದಿಂದ ಸಿಹಿ ಸುದ್ದಿ ಬರುತ್ತದೆ ಎಂದು ಹೇಳುವ ಬಿಜೆಪಿಯವರೇನು ಧರ್ಮಕ್ಕೆ ಕೊಡುತ್ತಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 45 ದಿನ ಕಳೆದರೂ ಕೇಂದ್ರ ಸರಕಾರ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ, ಆದರೆ ಬಿಜೆಪಿಯವರು ಮಾತ್ರ ಕೇಂದ್ರದಿಂದ ಸಿಹಿ ಸುದ್ದಿ ಬರಲಿದೆ ಎಂದು ಹೇಳುತ್ತಾ ತಿರುಗುತ್ತಿದ್ದಾರೆ. ಅವರೇನು ಧರ್ಮಕ್ಕೆ ಕೊಡುತ್ತಾರ. ನಮ್ಮ ತೆರಿಗೆ ಹಣ ಪಡೆದೆ ಕೊಡುವುದು ಎಂದು ಹೇಳಿದರು.
ಕರ್ನಾಟಕದಲ್ಲಿ ಯಾವುದೇ ಪರೀಕ್ಷೆ ನಡೆದರೂ ಕನ್ನಡದಲ್ಲಿ ಇರಬೇಕು. ಕನ್ನಡಕ್ಕೆ ಆದ್ಯತೆ ನೀಡದಿದ್ದರೆ ಅದು ಕನ್ನಡಿಗರಿಗೆ ಮಾಡಿದ ಅವಮಾನ, ಕನ್ನಡದಲ್ಲೇ ಪರೀಕ್ಷೆ ನಡೆಯಬೇಕು ಎಂದು ಕನ್ನಡ ಪರ ಸಂಘಟನೆಗಳು ಧ್ವನಿ ಎತ್ತಬೇಕು. ಅಮಿತ್ ಶಾಗೆ ಬುದ್ದಿ ಕಡಿಮೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ. ದೇಶದ ಎಲ್ಲಾ ಭಾಷೆಗಳಂತೆ ಹಿಂದಿ ಸಹ ಒಂದು. ಹಿಂದಿ ಸಾರ್ವಭೌಮ ಭಾಷೆ ಅಲ್ಲ. ಬಲತ್ಕಾರವಾಗಿ ಯಾವ ಭಾಷೆಯನ್ನು ಹೇರಬಾರದು. ಯಾವ ಭಾಷೆ ಕಲಿಯಲು ನಮ್ಮ ಅಭ್ಯಂತರ ಇಲ್ಲ ಎಂದು ಹೇಳಿದರು.
ಜಿ.ಟಿ.ದೇವೇಗೌಡ ಸತ್ಯ ಹೇಳಿದ್ದಾರೆ: ಮಾಜಿ ಸಚಿವ ಜಿ.ಟಿ.ದೇವೇಗೌಡ ಹುಣಸೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಸತ್ಯ ಹೇಳಿದ್ದಾರೆ. ಜಿ.ಟಿ.ದೇವೇಗೌಡ ಬಿಜೆಪಿ ಜೊತೆ ಹೋಗಲು ಕುಮಾರಸ್ವಾಮಿ ಹೇಳಿದ್ದರು ಎಂಬುದು ಸತ್ಯ ಇರಬೇಕು, ನಾವು ಹೇಳಿದರೆ ಬಣ್ಣ ಕಟ್ಟಿದರು ಎಂದು ಹೇಳುತ್ತಾರೆ. ಜೆಡಿಎಸ್ ಪಕ್ಷದ ಶಾಸಕರೆ ಹೇಳಿದರೆ ಜನರಿಗೆ ಸತ್ಯ ಏನೆಂದು ಗೊತ್ತಾಗುತ್ತದೆ. ನಾನು ಜೆಡಿಎಸ್ ಪಕ್ಷ ಬಿಟ್ಟವನಲ್ಲ, ಅವರೆ ನನ್ನ ತೆಗೆದು ಹಾಕಿದರು ಎಂದು ಹೇಳಿದರು.