ಕಬ್ಬು ಸಾಗಾಟ ಮಾಡದಿದ್ದರೆ ಬೀದಿಗಿಳಿದು ಹೋರಾಟ: ಸಿ.ಎಸ್.ಪುಟ್ಟರಾಜು ಎಚ್ಚರಿಕೆ
ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು
ಮಂಡ್ಯ, ಸೆ.18: ಮೈಷುಗರ್, ಪಿಎಸ್ಎಸ್ಕೆ ಕಾರ್ಖಾನೆ ವ್ಯಾಪ್ತಿ ಕಬ್ಬನ್ನು ಹೊರ ಜಿಲ್ಲೆಗಳಿಗೆ ಸಾಗಾಟ ಮಾಡಲು ಮೂರು ದಿನದಲ್ಲಿ ಕ್ರಮವಹಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಮಾಜಿ ಸಚಿವ, ಶಾಸಕ ಸಿ.ಎಸ್.ಪುಟ್ಟರಾಜು ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಕೆಆರ್ಎಸ್ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 15 ದಿನದ ಹಿಂದೆ ಸಭೆಯಲ್ಲಿ ಭರವಸೆ ನೀಡಿದಂತೆ ಮುಖ್ಯಮಂತ್ರಿಗಳು ಕಬ್ಬು ಸಾಗಾಣೆಗೆ ಕ್ರಮವಹಿಸದಿದ್ದರೆ ಹೋರಾಟದ ಬಿಸಿ ಹೇಗಿದೆ ಎಂಬುದನ್ನು ತೋರಿಸಬೇಕಾಗುತ್ತದೆ ಎಂದರು. ನಮ್ಮ ಮೈತ್ರಿ ಸರಕಾರವಿದ್ದಾಗ ಮೈಷುಗರ್ ಕಾರ್ಖಾನೆಗೆ 69 ಕೋಟಿ ರೂ. ನೀಡಿ ಆರಂಭಿಸಲು ತೀರ್ಮಾನ ಮಾಡಲಾಗಿತ್ತು. ಈಗ ಸರಕಾರ ಬದಲಾಗಿದೆ. ಸಿಎಂ ಮಂಡ್ಯದವರೇ ಆಗಿರುವುದರಿಂದ ಪುನಶ್ಚೇತನಗೊಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಡಿಸ್ನಿಲ್ಯಾಂಡ್ ನಿರ್ಮಿಸುವ ತೀರ್ಮಾನವನ್ನು ನಮ್ಮ ಸರಕಾರ ಮಾಡಿತ್ತು. ಕ್ಯಾಬಿನೆಟ್, ಸಂಬಂಧಿಸಿ ಇಲಾಖೆ, ಹಣಕಾಸು ಇಲಾಖೆ ಒಪ್ಪಿಗೆಯೂ ಆಗಿದೆ. ಸರಕಾರ ನಿಲ್ಲಿಸಲು ಮುಂದಾದರೆ ಸದನದಲ್ಲಿ ಹೋರಾಟ ನಡೆಸಲಾಗುವುದು ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
ಚಲುವರಾಯಸ್ವಾಮಿಗೆ ತಿರುಗೇಟು:
ಮಾಜಿ ಸಚಿವ ಚಲುವರಾಯಸ್ವಾಮಿ ಮೊದಲು ತಮ್ಮ ಪಕ್ಷ ಯಾವುದು ಹೇಳಬೇಕು. ಹಗಲು ಸಿದ್ದರಾಮಯ್ಯ, ರಾತ್ರಿ ಯಡಿಯೂರಪ್ಪ ಜತೆ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ತಿರುಗೇಟು ನೀಡಿದರು.
ಇಲ್ಲಿ ಸಿದ್ದರಾಮಯ್ಯ ಜತೆ ಕುಳಿತು ಯಡಿಯೂರಪ್ಪನ ಬೈಯುತ್ತಾರೆ, ಅತ್ತ ಯಡಿಯೂರಪ್ಪನ ಮನೆಯಲ್ಲಿ ಕುಳಿತಿರುತ್ತಾರೆ. ವೈಯಕ್ತಿಕ ಬೇಳೆ ಬೇಯಿಸಿಕೊಳ್ಳುವುದಕ್ಕೆ ಅವಕಾಶವಾದಿ, ಅನೈತಿಕ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ, ಡಿಕೆಶಿ ಸಂಬಂಧ ಏನೆಂದು ತಿಳಿದುಕೊಂಡು ಮಾತನಾಡಬೇಕು. ಇವರು (ಚಲುವರಾಯಸ್ವಾಮಿ) ಹೇಗೆ ಎಂಬುದು ಡಿಕೆಶಿಗೆ ಗೊತ್ತು. ಕಾಂಗ್ರೆಸ್ನಲ್ಲಿ ಯಾರ್ಯಾರ ಬಾಲಂಗೋಚಿ ಇಟ್ಕೊಂಡು ಏನು ಮಾಡಿದ್ದಾರೆಂಬುದು ಸ್ವಲ್ಪ ದಿನದಲ್ಲಿ ಬಯಲಾಗುತ್ತದೆ ಎಂದರು.
ಅಂಬರೀಷ್ ಅವರ ವರ್ಚಸ್ಸು, ಸಾವಿನ ಅನುಕಂಪದಿಂದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಗೆಲುವು ಪಡೆದರೇ ಹೊರತು ಚಲುವರಾಯಸ್ವಾಮಿಯಿಂದಲ್ಲ. ಆಗಿದ್ದರೆ ನಾಗಮಂಗಲದಲ್ಲಿ ನಿಖಿಲ್ಗೆ ಲೀಡ್ ಏಕಾಯಿತು? ಮನ್ಮುಲ್ ಚುನಾವಣೆಯಲ್ಲಿ ಅವರ ಅಭ್ಯರ್ಥಿಗಳ ಸ್ಥಿತಿ ಏನಾಯಿತು? ಎಂದು ಟಾಂಗ್ ನೀಡಿದರು.
ನಿಖಿಲ್ ಸೋಲಿನ ಹೊಣೆ ನಾನೇ ಹೊರುತ್ತೇನೆ. ಎರಡೂವರೆ ಲಕ್ಷ ಮತಗಳಲ್ಲಿ ಗೆಲ್ಲದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಆದರೆ, ದೇವೇಗೌಡರ ಮಾತಿಗೆ ಬೆಲೆಕೊಟ್ಟು ರಾಜೀನಾಮೆ ನೀಡಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅನರ್ಹ ಶಾಶಕ ಕೆ.ಸಿ.ನಾರಾಯಣಗೌಡರಿಂದ ಮಾರ್ಗದರ್ಶನ ಮಾಡಿಕೊಳ್ಳುವ ದುಸ್ಥಿತಿ ನನಗಿಲ್ಲ. ನಾನೇ ಅವರಿಗೆ ಮಾರ್ಗದರ್ಶನ ನೀಡಿ ರಾಜಕೀಯ ಶಕ್ತಿ ತುಂಬಿದ್ದೇನೆ ಎಂದು ಅವರು ವ್ಯಂಗ್ಯವಾಡಿದರು.
ಜೆಡಿಎಸ್ಗೆ ಮನ್ಮುಲ್ ಚುಕ್ಕಾಣಿ: ಜೆಡಿಎಸ್ನಲ್ಲಿ 8 ಜನ ನಿರ್ದೇಶಕರಿದ್ದಾರೆ. ಕಾಂಗ್ರೆಸ್ ಬಂಡಾಯ ನಿರ್ದೇಶಕರೂ ಸಹಕಾರ ನೀಡಲಿದ್ದಾರೆ. ಹಾಗಾಗಿ ಜೆಡಿಎಸ್ ಮನ್ಮುಲ್ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಪುಟ್ಟರಾಜು ಹೇಳಿದರು.
ಬಿಜೆಪಿಗೆ ಮನ್ಮುಲ್ ಗದ್ದುಗೆ ನೀಡಲು ಸರಕಾರ ವಾಮಮಾರ್ಗ ಅನುಸರಿಸುತ್ತಿದೆ. ಜೆಡಿಎಸ್ ನಿರ್ದೇಶಕರ ಆಯ್ಕೆ ಅಮಾನತು ಮಾಡಲು ಯತ್ನಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಸರಕಾರದ ಒತ್ತಡಕ್ಕೆ ಸಿಲುಕಿ ಕಾನೂನುಬದ್ದವಾಗಿ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೆಡಿಎಸ್ ನಿರ್ದೇಶಕರ ಆಯ್ಕೆಯನ್ನು ಅಮಾನ್ಯಗೊಳಿಸಲು ಮುಂದಾದರೆ ನಮ್ಮ ಶಾಸಕರು, ಕಾರ್ಯಕರ್ತರು ಜಿಲ್ಲಾಧಿಕಾರಿಗೆ ದಿಬ್ಬಂಧನ ಮಾಡಲಿದ್ದಾರೆ ಎಂದು ಅವರು ಎಚ್ಚರಿಸಿದರು.
ನಮ್ಮ ಶಾಸಕ ಡಿ.ಸಿ.ತಮ್ಮಣ್ಣ ಗೆಲ್ಲಿಸಿದ ಸ್ವಾಮಿ ಅವರ ಮನೆ ಹಾಳು ಮಾಡಲು ಚಲುವರಾಯಸ್ವಾಮಿ ಹೊರಟಿದ್ದಾರೆ. ಅವರನ್ನು ಕರೆದುಕೊಂಡು ಕರೆದುಕೊಂಡು ಹೋಗಿ ಅಶೋಕ್ ಹೊಟೇಲ್ನಲ್ಲಿ ಕೂರಿಸಿಕೊಂಡಿದ್ದಾರೆ ಎಂದೂ ಅವರು ಆರೋಪ ಮಾಡಿದರು.
ಚಲುವರಾಯಸ್ವಾಮಿ ಸಲ್ಲದ ಆರೋಪ ಬಿಡಬೇಕು. ಮಾಜಿ ಸಚಿವರಾಗಿ ಜವಾಬ್ಧಾರಿ ಇರುವುದರಿಂದ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಹೇಗಿದ್ದರೂ ಯಡಿಯೂರಪ್ಪ ಜತೆ ಚೆನ್ನಾಗಿದ್ದಾರಲ್ಲ ಎಂದು ಅವರು ಸಲಹೆ ನೀಡಿದರು.